ಬೆಂಗಳೂರು: ನೇಕಾರರಿಗೆ ಶೇ 1ರ ಬಡ್ಡಿ ದರದಲ್ಲಿ ಸಾಲ ನೀಡಬೇಕು ಎಂದು ರಾಜ್ಯ ನೇಕಾರರ ಸಂಘವು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರಿಗೆ ಮನವಿ ಮಾಡಿದೆ.
ಈ ಬಾರಿಯ ಬಜೆಟ್ನಲ್ಲಿ ಇದನ್ನು ಪ್ರಕಟಿಸಬೇಕು. ಸರ್ಕಾರ ಈಗಾಗಲೇ ಶೇ 3ರ ದರದಲ್ಲಿ ಸಾಲ ನೀಡಿದೆ. ಆದರೆ 2009-10, 2010-11 ಮತ್ತು 2011-12ರ ಬಡ್ಡಿ ಹಣವನ್ನು ಈವರೆಗೂ ಬಿಡುಗಡೆ ಮಾಡಿಲ್ಲ. ಬಡ್ಡಿ ಹಣ ಬಿಡುಗಡೆ ಮಾಡಲು ಈ ಕೂಡಲೇ ಕ್ರಮ ಕೈಗೊಳ್ಳಬೇಕು. ಸಾಲದ ಬಡ್ಡಿ ಮತ್ತು ದಂಡ ಬಡ್ಡಿಯನ್ನು ಮನ್ನಾ ಮಾಡಿ ಸಾಲಗಾರರ ಹೊರೆ ತಪ್ಪಿಸಬೇಕು ಎಂದು ಸಂಘದ ರಾಜ್ಯಾಧ್ಯಕ್ಷ ಎಣ್ಣೆಗೆರೆ ಆರ್.ವೆಂಕಟರಾಮಯ್ಯ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಗುಬ್ಬಿ ತಾಲ್ಲೂಕಿನ ಪುರ ಗ್ರಾಮದಲ್ಲಿ ಕಲ್ಲೇಶ್ವರಸ್ವಾಮಿ ಕಲ್ಯಾಣ ಮಂಟಪ ಟ್ರಸ್ಟ್ 120/125 ಅಡಿ ಸ್ವಂತ ಜಾಗ ಹೊಂದಿದೆ. ಅಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಮಾಡುವ ಉದ್ದೇಶವಿದ್ದು, ಸರ್ಕಾರ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮದಲ್ಲಿ 80 ಲಕ್ಷ ರೂಪಾಯಿ ಬಿಡುಗಡೆ ಮಾಡಿದರೆ ಅನುಕೂಲವಾಗುತ್ತದೆ. ಅರಸೀಕೆರೆ ತಾಲ್ಲೂಕಿನ ಎ.ಮಲ್ಲಾಪುರದಲ್ಲಿ ಕೈಗೊಂಡಿರುವ ಸಮುದಾಯ ಭವನ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದನ್ನು ಪೂರ್ಣಗೊಳಿಸಲು ಐವತ್ತು ಲಕ್ಷ ರೂಪಾಯಿ ಬಿಡುಗಡೆ ಮಾಡಬೇಕು ಎಂದು ಅವರು ಹೇಳಿದ್ದಾರೆ.
ವಿವಿಧ ಯೋಜನೆಗಳಲ್ಲಿ ಸರ್ಕಾರ ನೀಡುತ್ತಿರುವ ವಿದ್ಯಾರ್ಥಿ ವೇತನ, ಅಂಗವಿಕಲ ವೇತನ, ವಿಧವಾ ವೇತನ ಯೋಜನೆಯ ಸೌಲಭ್ಯ ನೇಕಾರ ಸಮುದಾಯದವರಿಗೆ ಹೆಚ್ಚು ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.