ಹುಬ್ಬಳ್ಳಿ: ಚಿಕ್ಕ ಉದ್ದಿಮೆಗಳು ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಿಗೆ ಮಾರಾಟ ಮಾಡುವ ಉತ್ಪನ್ನಗಳಿಗೆ ಶೇ 2ರಷ್ಟು ಮಾರಾಟ ತೆರಿಗೆ ವಿಧಿಸುವಂತೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ವಸಂತ ಲದವಾ ಒತ್ತಾಯಿಸಿದರು.
ಅವರು ನಗರದಲ್ಲಿ ಕಾನ್ಫಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚಿಕ್ಕ ಉದ್ದಿಮೆಗಳು ಮೌಲ್ಯ
ವರ್ಧಿತ ತೆರಿಗೆಯಡಿ ತೆರಿಗೆ ಸಹಿತ ಸಲ್ಲಿಸಬೇಕಾದ ನಮೂನೆ 100 ಅನ್ನು ಪ್ರತಿ ತಿಂಗಳಿಗೆ ಬದಲಾಗಿ ಮೂರು ತಿಂಗಳಿಗೊಮ್ಮೆ ಸಲ್ಲಿಸಲು ಅವಕಾಶ ನೀಡಬೇಕು ಎಂದೂ ಮನವಿ ಮಾಡಿದರು.
ಚಿಕ್ಕ ಉದ್ದಿಮೆಗಳು ರೈಲ್ವೆ ಇಲಾಖೆಗೆ ಒಂದು ಯೂನಿಟ್ಗೆ ₨ 100ರಂತೆ ದರ ಸೂಚಿಸಿ ಕೊಟೇಶನ್ ಸಲ್ಲಿಸಿದರೆ, ಅದಕ್ಕೆ ಶೇ 14.5ರಷ್ಟು ತೆರಿಗೆ ವಿಧಿಸಲಾಗುತ್ತದೆ. ಹೀಗಾಗಿ ರಾಜ್ಯದ ಉದ್ದಿಮೆಗಳು ಯೂನಿಟ್ಗೆ ₨ 114.5 ದರ ನೀಡಬೇಕಾಗುತ್ತದೆ. ಆದರೆ, ಇತರ ರಾಜ್ಯಗಳ ಉದ್ದಿಮೆಗಳು ಸರಬರಾಜು ಮಾಡುವ ಉತ್ಪನ್ನಗಳಿಗೆ ಇಲಾಖೆಯು ಶೇ 2ರಷ್ಟು ತೆರಿಗೆ ವಿಧಿಸುವುದರಿಂದ ಆ ರಾಜ್ಯಗಳ ಯೂನಿಟ್ ದರ ₨ 102 ಮಾತ್ರ ಆಗುತ್ತದೆ.
ಇದರಿಂದಾಗಿ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ರಾಜ್ಯದಲ್ಲಿ ಉತ್ಪಾದಿತ ಉತ್ಪನ್ನಗಳನ್ನು ಖರೀದಿ ಮಾಡದೇ ಪರ ರಾಜ್ಯದಿಂದ ಖರೀದಿ ಮಾಡುತ್ತಿವೆ. ರಾಜ್ಯದಲ್ಲಿ ಸಣ್ಣ ಉದ್ದಿಮೆದಾರರ ಹಿತದೃಷ್ಟಿಯಿಂದ ರಾಜ್ಯದಲ್ಲಿ ಸಹ ಶೇ 2ರಷ್ಟು ತೆರಿಗೆ ವಿಧಿಸಬೇಕು ಎಂದೂ ಮನವಿ ಮಾಡಿದರು.
ಕಾನ್ಫಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿಯ ಮುಖ್ಯಸ್ಥ ಡಿ.ಆರ್.ಸುಬ್ರಹ್ಮಣ್ಯ ಸ್ವಾಗತಿಸಿದರು. ಎಸ್ಐಡಿಬಿಐ ನಿಂದ ಸಿಗುವ ಆರ್ಥಿಕ ಸಹಾಯ ಕುರಿತಂತೆ ಎಸ್ಐಡಿಬಿಐನ ಪ್ರಧಾನ ವ್ಯವಸ್ಥಾಪಕ ಸತ್ಯಾನಂದ ವಿವರಿಸಿದರು.
ನಗರದಲ್ಲಿನ ವ್ಯಾಪಾರಾಭಿವೃದ್ಧಿ ಕುರಿತು ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಅಶೋಕ ಶೆಟ್ಟರ ಮಾತನಾಡಿದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಸಿದ್ದೇಶ್ವರ ಜಿ.ಕಮ್ಮಾರ ಹಾಗೂ ಇತರರು ಉಪಸ್ಥಿತರಿದ್ದರು.