ಚೆನ್ನೈ (ಪಿಟಿಐ): `ಬಹುಬ್ರಾಂಡ್ ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್ಡಿಐ) ಶೇ 51ರಷ್ಟು ಅವಕಾಶ ನೀಡಿರುವ ಕೇಂದ್ರದ ಕ್ರಮ ಸ್ವಾಗತಾರ್ಹ. ಇದರಿಂದ ಒಟ್ಟಾರೆ ದೇಶದ ಆಂತರಿಕ ಉತ್ಪಾದನೆ ಹೆಚ್ಚಲಿದ್ದು, ಆಹಾರ ಪೂರೈಕೆ ಸರಪಣಿ ಸಮರ್ಪಕವಾಗಲಿದೆ~ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಡೆಪ್ಯುಟಿ ಗವರ್ನರ್ ಸುಭೀರ್ ಗೋಕರ್ಣ ಹೇಳಿದ್ದಾರೆ.
ಭಾರತದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಕಡಿಮೆ ಮಟ್ಟದಲ್ಲಿದ್ದು, ಅಸಮರ್ಪಕ ಪೂರೈಕೆ ವ್ಯವಸ್ಥೆ ಇದೆ. ಹಣದುಬ್ಬರ ಹೆಚ್ಚಲು ಇದೇ ಪ್ರಮುಖ ಕಾರಣ. `ಎಫ್ಡಿಐ~ನಿಂದ ಈ ಸಮಸ್ಯೆ ಬಗೆಹರಿಯಲಿದ್ದು, ಆಹಾರ ಪದಾರ್ಧಗಳ ಬೆಲೆಯೂ ತಗ್ಗಲಿದೆ~ ಎಂದು ಅವರು ಇಲ್ಲಿ ನಡೆದ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ (ಅಸೋಚಾಂ) 102ನೇ ವಾರ್ಷಿಕ ಮಹಾ ಸಭೆಯಲ್ಲಿ ಹೇಳಿದರು.
ವಿಮಾ ರಂಗದಲ್ಲಿ ಶೇ 49ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಿರುವುದನ್ನು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(ಐಆರ್ಡಿಎ) ಸ್ವಾಗತಿಸಿದೆ.
`ಇದರಿಂದ ವಿಮಾ ಕ್ಷೇತ್ರಕ್ಕೆ ಹೆಚ್ಚಿನ ಬಂಡವಾಳ ಹರಿದುಬರಲಿದ್ದು, ಸೇವೆ ಒದಗಿಸುವಲ್ಲಿ ಕಂಪೆನಿಗಳ ನಡುವೆ ಸ್ಪರ್ಧೆ ಹೆಚ್ಚಲಿದೆ ಎಂದು `ಐಆರ್ಡಿಎ~ ಅಧ್ಯಕ್ಷ ಜೆ.ಹರಿನಾರಾಯಣ್ ಇಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಸಭೆಯಲ್ಲಿ ಹೇಳಿದರು.
ಕೇರಳದಲ್ಲಿ ವಿರೋಧ
ತಿರುವನಂತಪುರ (ಐಎಎನ್ಎಸ್): ಬಹುಬ್ರಾಂಡ್ ಚಿಲ್ಲರೆ ವಹಿವಾಟಿನಲ್ಲಿ `ಎಫ್ಡಿಐ~ಗೆ ಅವಕಾಶ ನೀಡಿದ್ದನ್ನು ವಿರೋಧಿಸಿ ಕೇರಳದಲ್ಲಿ ಬುಧವಾರ ಅಂಗಡಿ ಮುಚ್ಚಿ ಪ್ರತಿಭಟಿಸಲಾಯಿತು. ಕೇರಳ ವ್ಯಾಪಾರಿ-ವ್ಯವಸಾಯಿ ಏಕೋಪನ ಸಮಿತಿ (ಕೆವಿವಿಇಎಸ್) ಪ್ರತಿಭಟನೆಗೆ ಕರೆ ನೀಡಿತ್ತು.