ನವದೆಹಲಿ(ಪಿಟಿಐ): ವಿತ್ತೀಯ ಕೊರತೆಯನ್ನು ಒಟ್ಟಾರೆ ರಾಷ್ಟ್ರೀಯ ಉತ್ಪಾದನೆ(ಜಿಡಿಪಿ)ಯ ಶೇ 5.3ರ ಮಿತಿಯಲ್ಲಿಯೇ ಉಳಿಸಿಕೊಳ್ಳಲು ಬದ್ಧಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ಇಲ್ಲಿ ರಾಜ್ಯಪಾಲರ ಸಮಾವೇಶದಲ್ಲಿ ಮಂಗಳವಾರ ಮಾತನಾಡಿ, ಕಳೆದ ದಶಕದಲ್ಲಿ ಆರ್ಥಿಕ ಪ್ರಗತಿ ಸರಾಸರಿ ಶೇ 8ರಷ್ಟು ದಾಖಲಾಗಿದ್ದಿತು. ಕಳೆದೆರಡು ವರ್ಷಗಳಿಂದ ಪ್ರಗತಿ ಮಂದಗತಿಯಲ್ಲಿದೆ. ಪ್ರಸಕ್ತ ಹಣಕಾಸು ವರ್ಷ ನಿರೀಕ್ಷೆಗಿಂತ ಕೆಳಮಟ್ಟದಲ್ಲಿದೆ.
ಇಂಥ ಸ್ಥಿತಿಯಿಂದ ಹೊರಬಂದು ಚೇತರಿಕೆ ಕಾಣುವ ಸಲುವಾಗಿ ಸರ್ಕಾರ ಆರ್ಥಿಕ ಸುಧಾರಣೆಯ ಹಲವು ಕ್ರಮಗಳನ್ನು ಕೈಗೊಂಡಿದೆ. ಬೃಹತ್ ಯೋಜನೆಗಳಿಗೆ ತ್ವರಿತಗತಿ ಅನುಮತಿ ನೀಡುವುದು ಸಹ ಅಂತಹ ಕ್ರಮಗಳಲ್ಲೊಂದು ಎಂದರು.
ಮಂದಗತಿ ಪ್ರಗತಿಗೆ ದೇಶದೊಳಗಿನ ಮತ್ತು ಹೊರಗಿನ ವಿದ್ಯಮಾನಗಳೂ ಕಾರಣವಾಗಿವೆ. ಈ ಪರಿಸ್ಥಿತಿಯನ್ನು ಬದಲಿಸಿ ಬಂಡವಾಳ ಹೂಡಿಕೆಗೆ ಭರವಸೆಯ ವಾತಾವರಣ ಮೂಡಿಸಲು ಮತ್ತು ಪಗ್ರತಿಯ ಹಾದಿಗೆ ಮರಳಲು ಸರ್ಕಾರ ಎಲ್ಲ ರೀತಿಯ ಪ್ರಯತ್ನವನ್ನೂ ನಡೆಸುತ್ತಿದೆ ಎಂದು ಹೇಳಿದರು.