ಲಿಂಗಸುಗೂರ: ಬಹುಸಂಖ್ಯಾತ ಅನಕ್ಷರತೆ ರಾಷ್ಟ್ರದ ಅಭಿವೃದ್ಧಿಗೆ ಶಾಪವಾಗಿದೆ. ಶೈಕ್ಷಣಿಕ ಪ್ರಗತಿಯಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಮನಗಂಡು ‘ಸಾಕ್ಷರ ಭಾರತ’ ಕಾರ್ಯಕ್ರಮ ಆಯೋಜಿಸಲಾಗಿದೆ.
ನಾಗರಿಕ ಸಮಾಜದ ಪ್ರತಿಯೊಬ್ಬರೂ ಈ ಕಾರ್ಯಕ್ರಮವನ್ನು ಜನಾಂದೋಲನವಾಗಿ ಮಾರ್ಪಡಿಸಿ ಸಾಕ್ಷರ ನಾಡು ಕಟ್ಟಲು ಮುಂದಾಗಬೇಕು ಎಂದು ತಹಸೀಲ್ದಾರ ಎಂ.ರಾಚಪ್ಪ ಮನವಿ ಮಾಡಿದರು.
ಗುರುವಾರ ತಾಲ್ಲೂಕು ಲೋಕ ಶಿಕ್ಷಣ ಸಮಿತಿ ಗ್ರಾಪಂ ಅಧ್ಯಕ್ಷರಿಗಾಗಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಅನಕ್ಷರತೆ ನಿವಾರಣೆಗೆ ಸರ್ಕಾರಗಳು ಸಾಕಷ್ಟು ಕಾರ್ಯಕ್ರಮ ರೂಪಿಸುತ್ತಾ ಬಂದಿವೆ.
ಜನತೆ ಸಹಕಾರ ದೊರೆತರೂ ಕೂಡ ನಿಧಾನಗತಿಯಲ್ಲಿ ಶೈಕ್ಷಣಿಕ ಪ್ರಗತಿ ಕಾಣುತ್ತಿರುವುದು ಅಭಿವೃದ್ಧಿಗೆ ಮಾರಕವಾಗಿದೆ. ಈ ನಿಟ್ಟಿನಲ್ಲಿ ತಾವುಗಳು ಹೆಚ್ಚಿನ ಸಹಕಾರ ನೀಡಬೇಕು” ಎಂದು ಕೋರಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಚ್ ನಾಗೂರು, ಸಿಡಿಪಿಒ ಪ್ರಭಾಕರ ಮಾತನಾಡಿ, ಹಿಂದಿನ ಕಾಲದ ಬಾಲಕಾರ್ಮಿಕತೆ ಇಂದಿನ ಅನಕ್ಷರತೆಗೆ ಕಾರಣವಾಗಿದೆ. ಅನಕ್ಷರತೆ ಸಾಮಾಜಿಕ ಪಿಡುಗಾಗಿ ಕಾಡುತ್ತಿದೆ. ಇದನ್ನು ಹೋಗಲಾಡಿಸಬೇಕಾದರೆ ಶಿಕ್ಷಣವೊಂದೇ ಮಾರ್ಗ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಾಕ್ಷರತಾ ಸಮಿತಿ ಕಾರ್ಯದರ್ಶಿ ಇಂದಿರಾ ಮಾತನಾಡಿ, “ಚಿನ್ನಕ್ಕಿಂತ ಅನ್ನ ಲೇಸು, ಅನ್ನಕ್ಕಿಂತ ಅಕ್ಷರ ಲೇಸು ಎಂಬ ಸಿದ್ಧಾಂತದಡಿ ಸಾಕ್ಷರ ಭಾರತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಮಾಜದ ಪ್ರತಿಯೊಬ್ಬರು ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಕೈಜೋಡಿಸಬೇಕು” ಎಂದು ಮನವಿ ಮಾಡಿದರು. ಗ್ರಾ.ಪಂ. ಅಧ್ಯಕ್ಷರಾದ ಲಕ್ಷ್ಮಮ್ಮ ಉಪ್ಪಾರನಂದಿಹಾಳ, ಶಂಕರಮ್ಮ ನಾಗರಹಾಳ ಮತ್ತಿತರರು ಪಾಲ್ಗೊಂಡಿದ್ದರು.