ಔರಾದ್: ರಾಜ್ಯದ ಬಿಜೆಪಿ ನೇತೃತ್ವದಸರ್ಕಾರ ಶೈಕ್ಷಣಿಕ ಸಮಸ್ಯೆ ಪರಿಹರಿಸಲು ವಿಫಲವಾಗಿದೆ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದರು.
ಎಬಿವಿಪಿ ಪ್ರಮುಖ ಅಶೋಕ ಶೆಂಬೆಳ್ಳಿ, ಬಸವರಾಜ ಹಳ್ಳೆ ನೇತೃತ್ವದಲ್ಲಿ ಪಟ್ಟಣದ ಕನ್ನಡಾಂಬೆ ವೃತ್ತದಿಂದ ಬಸವೇಶ್ವರ ವೃತ್ತದ ವರೆಗೆ ರ್ಯಾಲಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಬಿಜೆಪಿ ಸರ್ಕಾರ ತಮ್ಮ ಒಳ ಜಗಳದಲ್ಲಿ ತೊಡಗಿದ ಕಾರಣ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನೆಡೆಯಾಗುತ್ತಿದೆ.
ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಬಳಿ ಇರುವ 20ಕ್ಕೂ ಹೆಚ್ಚು ಖಾತೆಗಳು ಅವರಿಂದ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣ ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳ ಕೆಲಸ ಕಾರ್ಯಗಳಿಗೆ ಗ್ರಹಣ ಹಿಡಿದಿದೆ ಎಂದು ಎಬಿವಿಪಿ ಪ್ರಮುಖ ಅಶೋಕ ಶಂಬೆಳ್ಳಿ ದೂರಿದರು.
ಪ್ರಸಕ್ತ ಸಾಲಿನಲ್ಲಿ ಶೇ. 10ರಷ್ಟು ಹೆಚ್ಚಿಸಿದ ಸಿಇಟಿ ಶುಲ್ಕ ವಾಪಸ್ ಪಡೆಯಬೇಕು. ಪದವಿಪೂರ್ವ ಹಂತದಲ್ಲಿ ಕೇಂದ್ರೀಯ ಪ್ರವೇಶ ನೀತಿ ಜಾರಿ ಮಾಡಬೇಕು. ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಏಕರೂಪದ ವೇಳಾಪಟ್ಟಿ ಜಾರಿಮಾಡಬೇಕು. ರಾಜ್ಯದ ವಿವಿಧ ವಿವಿಗಳಲ್ಲಿ ಭ್ರಷ್ಟತೆಯಲ್ಲಿ ತೊಡಗಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಹೊಸ ವಿವಿಗಳಿಗೆ ಅಗತ್ಯ ಹಣಕಾಸು ಮತ್ತು ಮೂಲ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಪರಿಹರಿಸುವಂತೆ ಆಗ್ರಹಿಸಿದರು.
ಇದೇ ವೇಳೆ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಬಸವೇಶ್ವರ ವೃತ್ತದ ಬಳಿ ಮಾನವ ಸರ್ಪಳಿ ಮಾಡಿ ಗಮನ ಸೆಳೆದರು. ಅಂಬಾದಾಸ ನೇಳಗೆ, ಅರುಣಾ ಪಾಟೀಲ, ಅನಿಲಕುಮಾರ ಮೇತ್ರೆ, ಅಮರ, ಪ್ರಶಾಂತ ಸಿಂಧೆ, ಎಸ್. ಮುದಾಳೆ, ಮಹಾವೀರ ಸಿಂಧೆ, ಸಂತೋಷ ಯರನಾಳೆ, ಪೂಜಾ, ಸವಿತಾ, ಪೀಟರ್ ಮುದಾಳೆ, ಗಣೇಶ, ಲಖನ್, ಬಾಲಾಜಿ ವಾಘಮಾರೆ, ಬಾಲಾಜಿ ಮಾನೆ ರ್ಯಾಲಿಯಲ್ಲಿ ಪಾಲ್ಗೊಂಡರು.