ಮುಂಬೈ/ಕೋಲ್ಕತ್ತ (ಪಿಟಿಐ): ಪ್ರತ್ಯೇಕ ಮುಂಬೈ ರಾಜ್ಯ ಮಾಡಬೇಕೆಂಬ ಅಂಕಣಕಾರ್ತಿ ಶೋಭಾ ಡೇ ಸಲಹೆಯನ್ನು `ಅವಿವೇಕತನದ್ದು' ಎಂದಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್, `ರಾಜ್ಯವು ಏಕತೆಯಿಂದಲೇ ಉಳಿಯುವುದು' ಎಂದಿದ್ದಾರೆ.
`ಶೋಭಾ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬಾರದು. ಮುಂಬೈಯಾಗಲೀ ಅಥವಾ ವಿದರ್ಭವಾಗಲೀ ಮಹಾರಾಷ್ಟ್ರದಿಂದ ಪ್ರತ್ಯೇಕಗೊಳ್ಳುವುದಿಲ್ಲ' ಎಂದು ಅವರು ಗುರುವಾರ ಸ್ಪಷ್ಟಪಡಿಸಿದ್ದಾರೆ.
ಪ್ರತಿಭಟನೆ: ಶೋಭಾ ಹೇಳಿಕೆಗೆ ಶಿವಸೇನಾ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನಾ ಆಕ್ರೋಶ ವ್ಯಕ್ತಪಡಿಸಿವೆ. ಶಿವಸೇನಾ ಕಾರ್ಯಕರ್ತರು ಶೋಭಾ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಶೋಭಾ ವಿರುದ್ಧ ಅಪರಾಧ ಪ್ರಕರಣ ದಾಖಲಿಸುವಂತೆ ಶಿವಸೇನಾ ನಾಯಕ ಸಂಜಯ್ ರಾವತ್ ಆಗ್ರಹಿಸಿದ್ದರೆ, ಎಂಎನ್ಎಸ್ ನಾಯಕ ರಾಜ್ ಠಾಕ್ರೆ ಈ ಕಾದಂಬರಿಕಾರ್ತಿಯ ಮೇಲೆ ವಾಗ್ದಾಳಿ ಮಾಡಿದ್ದಾರೆ.
ಈ ಮಧ್ಯೆ, ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಲು ಅಥವಾ ಕ್ಷಮೆ ಯಾಚಿಸಲು ನಿರಾಕರಿಸಿರುವ ಶೋಭಾ, ತಮಗೆ ಜನರು ಬೆಂಬಲ ಸೂಚಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.