ಕೊಪ್ಪಳ: ನ್ಯಾಯಾಲಯ ತಡೆಯಾಜ್ಞೆಯನ್ನು ನೀಡಿದ್ದರೂ, ಸದರಿ ತಡೆಯಾಜ್ಞೆಯನ್ನು ಉಲ್ಲಂಘಿಸಿ ಸಾರ್ವಜನಿಕ ಮಹಿಳಾ ಶೌಚಾಲಯ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿ ನಗರದ ದೇವರಾಜ ಅರಸು ಕಾಲೋನಿಯ ಮಹಿಳೆಯರು ಸೋಮವಾರ ಪ್ರತಿಭಟನೆ ನಡೆಸಿದರು.ಚೊಂಬು ಸಮೇತ ಕಾಲೋನಿಯಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ನಗರಸಭೆ ಮುಂದೆ ಧರಣಿ ನಡೆಸಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಕಾಲೋನಿ ಮುಖಂಡ ಮುಸ್ತಫಾ ಖಾಜಿ ಮಾತನಾಡಿ, “2010-11ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಅನುದಾನದಡಿ 10 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಾಲೋನಿಯಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯ ನಿರ್ಮಾಣ ಆರಂಭಿಸಲಾಯಿತು. ಆದರೆ, ಕಾಲೋನಿಯ 9 ಜನರು ಇದರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿ, ವಾಸನೆ ಬರುತ್ತದೆ ಎಂಬ ಕಾರಣವೊಡ್ಡಿ ಶೌಚಾಲಯ ನಿರ್ಮಾಣ ಕಾಮಗಾರಿಗೆ ತಡೆಯಾಜ್ಞೆ ತಂದಿದ್ದಾರೆ” ಎಂದು ದೂರಿದರು.
ಕಾಲೋನಿಯಲ್ಲಿ ವಾಸಿಸುವ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಯನ್ನು ಅನುಲಕ್ಷಿಸಿ, ನ್ಯಾಯಾಲಯದಿಂದ ಇರುವ ತಡೆಯಾಜ್ಞೆಯನ್ನು ಉಲ್ಲಂಘಿ ಸಿಯಾದರೂ ಈ ಶೌಚಾಲಯ ನಿರ್ಮಾಣ ಕಾಮಗಾರಿಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು. ಕಾಲೋನಿಯ ಮುಖಂಡರಾದ ಹುಸೇನ್ ಪೀರಾ, ಶಿವಾನಂದ ಹೊದ್ಲೂರು, ಹಾಗೂ ವಿವಿಧ ಮಹಿಳಾ ಸಂಘಗಳ ಸದಸ್ಯರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.