ಔರಾದ್: ಶೌಚಾಲಯ ಕಟ್ಟಿಸಿ ಮಾನ ಉಳಿಸುವಂತೆ ಆಗ್ರಹಿಸಿ ಶೆಂಬೆಳ್ಳಿ ಗ್ರಾಮದ ಸ್ವಸಹಾಯ ಗುಂಪಿನ ಮಹಿಳೆಯರು ಈಚೆಗೆ ಅಲ್ಲಿಯ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಚಿಗುರು ಮತ್ತು ಪಲ್ಲವಿ ಸ್ವಸಹಾಯ ಗುಂಪಿನ ಮಮತಾ, ಸಂಗೀತಾ, ಲಕ್ಷ್ಮೀ, ಕರುಣಾದೇವಿ ಸೇರಿದಂತೆ ಅನೇಕ ಮಹಿಳೆಯರು ಗ್ರಾಮ ಪಂಚಾಯಿತಿ ಎದುರು ಕೆಲ ಕಾಲ ಪ್ರತಿಭಟನೆ ನಡೆಸಿದರು. ಶೌಚಾಲಯ ಇಲ್ಲದೆ ಮಹಿಳೆಯರಿಗೆ ತೊಂದರೆಯಾಗುತ್ತಿದೆ. ಅದರಲ್ಲೂ ರಾತ್ರಿ ವೇಳೆ ಬಯಲು ಶೌಚಾಲಯದಿಂದ ಯುವತಿಯರಿಗೆ ಹೆದರಿಕೆಯಾಗುತ್ತಿದೆ. ಹೀಗಾಗಿ ಆದಷ್ಟು ಬೇಗ ಶೌಚಾಲಯ ವ್ಯವಸ್ಥೆ ಮಾಡುವಂತೆ ಕೇಳಿಕೊಂಡಿದ್ದಾರೆ.
ಖಾತರಿ ಕೆಲಸ: ಉದ್ಯೋಗ ಖಾತರಿ ಯೋಜನೆಯಡಿ ಸ್ವಸಹಾಯ ಗುಂಪಿನ ಮಹಿಳೆಯರಿಗೂ ಕೆಲಸ ನೀಡುವಂತೆ ಆಗ್ರಹಿಸಿದ್ದಾರೆ. ಹಲವರು ಕೆಲಸ ಇಲ್ಲದ ಕಾರಣ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯಿತಿಯವರು ಕಾಳಜಿ ವಹಿಸಿ ಕೆಲಸ ಮಾಡಲು ಮುಂದೆ ಬಂದ ಎಲ್ಲರಿಗೂ ಕೆಲಸ ನೀಡುವಂತೆ ಮನವಿ ಮಾಡಿಕೊಂಡರು. ಸ್ಥಳಕ್ಕೆ ಆಗಮಿಸಿದ ಅಭಿವೃದ್ಧಿ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.