ಭೋಪಾಲ (ಪಿಟಿಐ): ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣಕ್ಕೆ ಮದುವೆಯಾದ ಎರಡೇ ದಿನದಲ್ಲಿ ಗಂಡನ ಮನೆಯನ್ನು ತೊರೆದಿದ್ದ ಬುಡಕಟ್ಟು ಪಂಗಡಕ್ಕೆ ಸೇರಿದ ಮಹಿಳೆಯೊಬ್ಬರಿಗೆ ಐದು ಲಕ್ಷ ರೂಪಾಯಿ ಮೊತ್ತದ ಬಹುಮಾನ ಒಲಿದು ಬಂದಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ಬೆತುಲ್ ಜಿಲ್ಲೆಯಲ್ಲಿ ನಡೆದಿದೆ.
ಜೇತುದಾನ ಎಂಬ ಗ್ರಾಮಕ್ಕೆ ವಿವಾಹವಾಗಿ ಹೋಗಿದ್ದ ಅನಿತಾ, ಶೌಚಾಲಯ ಇಲ್ಲದ ಕಾರಣ ಮದುವೆಯಾದ ಎರಡೇ ದಿನದಲ್ಲಿ ಗಂಡನ ಮನೆಯನ್ನು ತ್ಯಜಿಸಿದ್ದರು. ಪತ್ನಿ ಈ ಕಾರಣಕ್ಕೆ ಮನೆ ಬಿಟ್ಟು ಹೋಗಿರುವುದನ್ನು ಪತಿ ತಮ್ಮ ಪಂಚಾಯತ್ನಲ್ಲಿ ಪ್ರಸ್ತಾಪಿಸಿದ್ದರು.
ಇದರ ಪರಿಣಾಮ ಸುಲಭ್ ಇಂಟರ್ನ್ಯಾಷನಲ್ ಸಂಸ್ಥೆ `ಸಮಗ್ರ ನೈರ್ಮಲ್ಯ ಅಭಿಯಾನ~ ಯೋಜನೆಯ ಅಡಿ ಶೌಚಾಲಯ ನಿರ್ಮಿಸುವುದಕ್ಕಾಗಿ ಅನಿತಾ ಅವರ ಜೇತುದಾನ ಗ್ರಾಮವನ್ನು ದತ್ತು ತೆಗೆದುಕೊಂಡಿದೆ.
`ಇತರ ಮಹಿಳೆಯರನ್ನು ಪ್ರೇರೇಪಿಸಬಲ್ಲ ಅವರ ಈ ದೃಢ ನಿರ್ಧಾರಕ್ಕಾಗಿ ಅನಿತಾ ಅವರಿಗೆ ಐದು ಲಕ್ಷ ರೂಪಾಯಿ ಮೊತ್ತದ ಬಹುಮಾನ ನೀಡಲು ನಿರ್ಧರಿಸಲಾಗಿದೆ~ ಎಂದು ಸಂಸ್ಥೆಯ ಮುಖ್ಯಸ್ಥ ಡಾ. ಬಿಂದೇಶ್ವರ್ ಪಾಠಕ್ ತಿಳಿಸಿದ್ದಾರೆ.
ಹಳ್ಳಿಗಳಲ್ಲಿ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಲು ಅನಿತಾ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ನೇಮಿಸಲಾಗುತ್ತದೆ ಎಂದು ಬೆತುಲ್ ಜಿಲ್ಲಾಧಿಕಾರಿ ಚಂದ್ರಶೇಖರ್ ಬೋರ್ಕರ್ ತಿಳಿಸಿದ್ದಾರೆ.