ನವದೆಹಲಿ (ಪಿಟಿಐ): ಸಂಸತ್ನಲ್ಲಿ 2ಜಿ ತರಂಗಾಂತರ ಹಂಚಿಕೆ ಹಗರಣದ ಕುರಿತು 2009ರಲ್ಲೇ ಪ್ರಸ್ತಾಪಿಸುವ ವಿಚಾರದಲ್ಲಿ ಬಿಜೆಪಿ ಮತ್ತು ಮಾಜಿ ಸಚಿವ ಅರುಣ್ ಶೌರಿ ನಡುವಿನ ವಿರೋಧಾಭಾಸದ ಹೇಳಿಕೆಗಳು ಸೋಮವಾರ ಕೂಡ ಮುಂದುವರಿದಿದೆ.
‘ಈ ವಿವಾದದ ಬಗ್ಗೆ ಬಿಜೆಪಿ ಮೊದಲ ದಿನದಿಂದಲೇ ಧ್ವನಿ ಎತ್ತಿದೆ. ಶೌರಿ ಅವರು ರಾಜ್ಯಸಭೆಯ ಸದಸ್ಯರಾಗಿರುವವರೆಗೂ ಈ ವಿವಾದ ಬಗ್ಗೆ ಸದನದಲ್ಲಿ ಮಾತನಾಡಿದ್ದಾರೆ’ ಎಂದು ಬಿಜೆಪಿ ವಕ್ತಾರ ಜಾವಡೇಕರ್ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಅರುಣ್ ಶೌರಿ ಅವರು ಕಳೆದ ವಾರ ನೀಡಿದ ಸಂದರ್ಶನವೊಂದರಲ್ಲಿ ‘ಈ ಹಗರಣದ ಬಗ್ಗೆ ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪಿಸುವಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಮತ್ತು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ ಅವರಲ್ಲಿ ವಿನಂತಿಸಿಕೊಂಡಿದ್ದೆ. ಆದರೆ ಅವರಿಬ್ಬರೂ ಈ ವಿಚಾರವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಲಿಲ್ಲ’ ಎಂದಿದ್ದರು.
ಶೌರಿ ಅವರ ಈ ಹೇಳಿಕೆಗೆ ಪ್ರತಿಯಾಗಿ ಬಿಜೆಪಿ ಕೂಡ ಹೇಳಿಕೆ ಬಿಡುಗಡೆ ಮಾಡಿದ್ದು, ರಾಜ್ಯಸಭೆಯಲ್ಲಿ ಅರುಣ್ ಜೇಟ್ಲಿ ಅವರು ಈ ವಿವಾದ ಬಗ್ಗೆ ಜುಲೈ 23, 2009ರಲ್ಲಿ ಮಾತನಾಡಿರುವ ಪ್ರತಿಯನ್ನು ಬಿಡುಗಡೆ ಮಾಡಿದೆ. ಈ ಹಗರಣದ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ, ಅರುಣ್ ಶೌರಿ ಅವರಿಗೆ ಫೆ. 21ರೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.