ಬೀದರ್: ಮೌನೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ನಗರದಲ್ಲಿ ಭಾನುವಾರ ಭಕ್ತಿ,ಶ್ರದ್ಧೆಯೊಂದಿಗೆ ಪಲ್ಲಕ್ಕಿ ಮೆರವಣಿಗೆ ನಡೆಯಿತು.
ನಗರದ ದೇವಿ ಕಾಲೋನಿಯ ಕಾಳಿಕಾದೇವಿ ಮಂದಿರದಿಂದ ಆರಂಭಗೊಂಡ ಮೆರವಣಿಗೆಯು ಮಡಿವಾಳ ವೃತ್ತ, ಸರ್ವಿಸ್ ಸ್ಟ್ಯಾಂಡ್, ಅಂಬೇಡ್ಕರ್ ವೃತ್ತ, ಮಹಾವೀರ ವೃತ್ತ, ಬಸವೇಶ್ವರ ವೃತ್ತ, ಬೊಮ್ಮಗೊಂಡೇಶ್ವರ ವೃತ್ತ, ರಾಮಚೌಕ್, ಬಿ.ಬಿ.ಬಿ. ಕಾಲೇಜು, ಸಿದ್ಧಾರೂಢ ಮಠದ ಮೂಲಕ ಹಾಯ್ದು ಮೌನೇಶ್ವರ ಮಂದಿರದಲ್ಲಿ ಸಮಾರೋಪಗೊಂಡಿತು.
ಅಲಂಕೃತ ವಾಹನದಲ್ಲಿ ಮೌನೇಶ್ವರರ ಭಾವಚಿತ್ರ ಇರಿಸಲಾಗಿತ್ತು.ಕಳಶ ಹೊತ್ತ ಮಹಿಳೆಯರು ಮೆರವಣಿಗೆಗೆ ಮೆರಗು ತಂದುಕೊಟ್ಟರು. ವೇಷಧಾರಿ ವ್ಯಕ್ತಿ ಸಾರ್ವಜನಿಕರ ಚಿತ್ತ ತಮ್ಮತ್ತ ಸೆಳೆದರು. ಪುರವಂತರ ಕುಣಿತ ವಿಶೇಷ ಆಕರ್ಷಣೆ ಆಗಿತ್ತು. ಇನ್ನು ಹಾಡುಗಳ ಮೇಲೆ ಯುವಕರು ಕುಣಿದು ಕುಪ್ಪಳಿಸಿದರು.
ಸಮಾಜದ ಪ್ರಮುಖರಾದ ಬಾಬುರಾವ್ ವಿಶ್ವಕರ್ಮ, ಪ್ರಭು ವಿಶ್ವಕರ್ಮ ಮಂಗಲಗಿ, ಅಣ್ಣೆಪ್ಪ ವಿಶ್ವಕರ್ಮ, ತುಕಾರಾಮ ವಿಶ್ವಕರ್ಮ ಮತ್ತಿತರರು ವೆುರವಣಿಗೆಯಲ್ಲಿ ಪಾಲ್ಗೊಂಡಿದ್ದರು.ಜಾತ್ರೆ ನಿಮಿತ್ತ ದೇವಸ್ಥಾನದ ಪರಿಸರದಲ್ಲಿ ಭಕ್ತಿಮಯ ವಾತಾವರಣ ಕಂಡು ಬಂದಿತು. ಕಾಯಿ, ಕರ್ಪೂರ, ಬೆಂಡು, ಬತಾಸೆ, ಕುಂಕುಮ, ಮಕ್ಕಳ ಆಟಿಕೆ ಮತ್ತಿತರ ಅಂಗಡಿಗಳು ತಲೆ ಎತ್ತಿದ್ದವು. ಪಾಲಕರು ಮಕ್ಕಳಿಗಾಗಿ ಆಟಿಕೆಗಳನ್ನು ಖರೀದಿಸುತ್ತಿದ್ದದೃಶ್ಯ ಸಾಮಾನ್ಯವಾಗಿತ್ತು.