ಶಿಕಾರಿಪುರ: ಪಟ್ಟಣದಲ್ಲಿ ಜೈನ ಸಮುದಾಯದ ಭಾಂದವರು ಮಂಗಳವಾರ ಮಹಾವೀರ ಜಯಂತಿಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.
ಬೆಳಿಗ್ಗೆ 11ಕ್ಕೆ ಮಂಡಿಪೇಟೆಯಲ್ಲಿರುವ ಜೈನ ಮಂದಿರದಿಂದ ಮಹಾವೀರರ ಭಾವಚಿತ್ರ ಹಾಗೂ ವಿಗ್ರಹ ಹೊಂದಿದ ವಾಹನದ ಜತೆ ವಾದ್ಯದೊಂದಿಗೆ ಮೆರವಣಿಗೆ ಹೊರಟ ಜೈನ ಸಮುದಾಯದ ಭಾಂದವರು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.
ಜೈನ ಸಮುದಾಯದ ಮಹಿಳೆಯರು ತಮ್ಮ ಮನೆ ಮುಂದೆ ಮೆರವಣಿಗೆ ಆಗಮಿಸಿದ ಸಂದರ್ಭದಲ್ಲಿ ಮಹಾವೀರರ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಮೆರವಣಿಗೆಯಲ್ಲಿದ್ದ ಭಾಂದವರಿಗೆ ಹಲವೆಡೆ ತಂಪು ಪಾನೀಯ ವಿತರಣೆ ಕೂಡ ನಡೆಯಿತು. ಮೆರವಣಿಗೆಯಲ್ಲಿ ಮಹಾವೀರರಿಗೆ ಯುವತಿಯರು ಘೋಷಣೆ ಹಾಕಿದರು. ಮೆರವಣಿಗೆ ನಂತರ ಮಧ್ಯಾಹ್ನ ಜೈನ ಮಂದಿರದಲ್ಲಿ ಮಹಾವೀರ ಜಯಂತಿ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆದವು.
ಸಮುದಾಯದ ಮುಖಂಡರಾದ ಸೂರಜ್ಮಲ್ಜೀ, ಪಾರಸ್ಮಲ್ಜೀ, ಕಾಳುಮಲ್ಜೀ, ಪ್ರವೀಣ್ ಶೇಟ್, ಭವರ್ಲಾಲ್, ಆನಂದ್ಕುಮಾರ್ ಉಪಸ್ಥಿತರಿದ್ದರು.
ಪೂಜೆ
ರಿಪ್ಪನ್ಪೇಟೆ: ಸಮೀಪದ ಹೊಂಬುಜ ಜೈನ ಮಠದಲ್ಲಿ ಮಂಗಳವಾರ ಭಗವಾನ್ ಮಹಾವೀರ ಜಯಂತಿ ಅಂಗವಾಗಿ ಪದ್ಮಾವತಿ ದೇವಿ ಹಾಗೂ ಪಾರ್ಶ್ವನಾಥ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಜರುಗಿತು.
ನಂತರದಲ್ಲಿ ಭಗವಾನ್ ಮಹಾವೀರ ಮೂರ್ತಿಗೆ 108 ಕಳಸಾಭೀಷೇಕ ಹಾಗೂ ಊರಿನ ಪ್ರಮುಖ ರಸ್ತೆಗಳಲ್ಲಿ ಅಡ್ಡಪಲ್ಲಕ್ಕಿ ಉತ್ಸವವು ಮಾತೆಯರ ಪೂರ್ಣಕುಂಭ ಸ್ವಾಗತದೊಂದಿಗೆ ಅದ್ದೂರಿಯಾಗಿ ಜರುಗಿದವು.
ಜಿಲ್ಲೆ ಹಾಗೂ ಹೊರ ಜಿಲ್ಲೆಯಿಂದ ಜೈನ ಸಮುದಾಯದ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.