ಬೆಂಗಳೂರು: ಹಲಸೂರು ಕೆರೆ ಪಕ್ಕದ ಗಂಗಾಧರ ಶೆಟ್ಟಿ ರಸ್ತೆಯ ನೋಟ ಭಾನುವಾರ ಬೆಳಿಗ್ಗೆ ನೋಡ ನೋಡುತ್ತಿದ್ದಂತೆಯೇ ಬದಲಾಯಿತು. ರಸ್ತೆ ಪಕ್ಕ ಬಿದ್ದಿದ್ದ ಕಸದ ರಾಶಿ ಒಂದೆರಡು ಗಂಟೆಗಳಲ್ಲಿ ಮಾಯವಾಯಿತು. ಫುಟ್ಪಾತ್ ಮೇಲೆ ಹರಡಿಕೊಂಡ ತ್ಯಾಜ್ಯವೂ ಕಣ್ಮರೆಯಾಯಿತು. ಓಡಾಡುವವರಿಗೆ ತೊಂದರೆಯಾಗುವಂತೆ ಮುರಿದು ಬಿದ್ದಿದ್ದ ಮರದ ಟೊಂಗೆಗಳು ಬಿಬಿಎಂಪಿ ಕಸ ಸಂಗ್ರಹದ ಲಾರಿ ಏರಿದವು.
ನಗರದ ಗ್ರೀನ್ ಲುಂಗಿ ಮೂವ್ಮೆಂಟ್ನ ಉತ್ಸಾಹಿ ಯುವಕರು, ಸೈನಿಕರ ಸಹಾಯದಿಂದ ಗಂಗಾಧರ ಶೆಟ್ಟಿ ರಸ್ತೆಯಲ್ಲಿ ಸ್ವಚ್ಛತಾ ಆಂದೋಲನ ನಡೆಸಿತು. `ಕಪ್ಪು ಕಲೆ ಮುಕ್ತ ನಗರ'ವನ್ನಾಗಿ ಬೆಂಗಳೂರನ್ನು ರೂಪಿಸುವುದೇ ನಮ್ಮ ಗುರಿ' ಎಂದು ಆಂದೋಲನದಲ್ಲಿ ಪಾಲ್ಗೊಂಡ ಯುವಕರು ಸಾರಿದರು.
`ರಸ್ತೆ ಸ್ವಚ್ಛವಾಗಿಲ್ಲ, ಎಲ್ಲ ಕಡೆಗೂ ಕಸ ಬಿದ್ದಿದೆ' ಎನ್ನುವ ಗೊಣಗಾಟ ಮನೆ-ಮನೆಯಲ್ಲೂ ಕೇಳಿ ಬರುತ್ತದೆ. ಈ ಯುವಕರು ಮನೆಯಿಂದ ಹೊರಬಂದು, ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿದ್ದಾರೆ. ಹೀಗಾಗಿ ನಾವೂ ಅವರಿಗೆ ಕೈಜೋಡಿಸುತ್ತಿದ್ದೇವೆ' ಎಂದು ಶ್ರಮದಾನದಲ್ಲಿ ಪಾಲ್ಗೊಂಡ ಸೈನಿಕರು ಹೇಳಿದರು.
`ಕಸಮುಕ್ತ ನಗರದ ಪರಿಕಲ್ಪನೆ ಕುರಿತು ಜನಜಾಗೃತಿ ಉಂಟು ಮಾಡುವ ಉದ್ದೇಶ ನಮ್ಮದಾಗಿದೆ. ಕಸ ಪ್ರತ್ಯೇಕಗೊಳಿಸಿ ನೀಡುವ ಸಂಬಂಧ ಮನೆ-ಮನೆಗೂ ತೆರಳಿ ಪ್ರಚಾರ ನಡೆಸುವ ಉದ್ದೇಶ ಹೊಂದಿದ್ದೇವೆ' ಎಂದು ಗ್ರೀನ್ ಲುಂಗಿ ಮೂವ್ಮೆಂಟ್ನ ಸಹ ಸ್ಥಾಪಕ ಜೆ. ಮನ್ಪ್ರೀತ್ ಹೇಳಿದರು.
ಬೆಳಿಗ್ಗೆ 7.30ಕ್ಕೆ ಸರಿಯಾಗಿ ಕೈ-ಬಾಯಿಗೆ ಗ್ಲೌಸ್ ಧರಿಸಿ ಬಂದ ಯುವಕರು ಮತ್ತು ಸೈನಿಕರ ದಂಡು, ಹಾರೆ, ಸಲಿಕೆ, ಕಸಬರಗಿ, ತಟ್ಟಿನ ಚೀಲ, ಬುಟ್ಟಿ ಮೊದಲಾದ ಸಾಧನಗಳೊಂದಿಗೆ ಕಾರ್ಯಾಚರಣೆಗೆ ಇಳಿಯಿತು. ಫುಟ್ಪಾತ್ ಮೇಲೆ ಬಿದ್ದಿದ್ದ ಮಣ್ಣಿನ ದಿನ್ನೆಗಳು ಕ್ಷಣಾರ್ಧದಲ್ಲಿ ಕರಗಿದವು.