ಕೂಡಲಸಂಗಮ: ಅಂತರ ರಾಷ್ಟ್ರೀಯ ಪ್ರವಾಸಿತಾಣವಾದ ಕೂಡಲಸಂಗಮ ಶ್ರಾವಣ ಮಾಸದಲ್ಲಿ ಅಪಾರ ಭಕ್ತರಿಂದ ತುಂಬಿರುತ್ತಿತ್ತು. ಜೊತೆಗೆ ಕೃಷ್ಣ ಮಲಪ್ರಭೆ ನದಿಗಳು ತುಂಬಿ ಹರಿಯುತ್ತಿದ್ದವು. ಆದರೆ ಈ ವರ್ಷ ಶ್ರಾವಣ ಮಾಸ ಆರಂಭವಾಗಿ ವಾರ ಕಳೆದರೂ ನದಿಗೆ ನೀರು ಹರಿದು ಬಂದಿಲ್ಲ.
ಇಲ್ಲಿಯ ಸಂಗಮೇಶ್ವರ ದೇವಾಲಯದ ಮುಂಭಾಗದ ಕೃಷ್ಣಾ ನದಿಯ ದಡದಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿ ತಾತ್ಕಾಲಿಕವಾಗಿ ನಿರ್ಮಿಸಿರುವ ಸ್ನಾನ ಘಟ್ಟದಲ್ಲಿ ಭಕ್ತರು ಸ್ನಾನ ಮಾಡುತ್ತಿದ್ದಾರೆ. ನೀರಿಲ್ಲದ ಕಾರಣ ಇಲ್ಲಿಗೆ ಬರುವ ಭಕ್ತರ ಸಂಖ್ಯೆಯೂ ಕಡಿಮೆಯಾಗಿದೆ.
ಆಲಮಟ್ಟಿ ಆಣೆಕಟ್ಟೆಯಿಂದ ಒಂದಿಷ್ಟು ನೀರು ಬಿಟ್ಟರೆ ಭಕ್ತರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ರಾಯಚೂರದ ಪ್ರವಾಸಿ ವೆಂಕಟೇಶ ಕುಲಕರ್ಣಿ.
ಶ್ರಾವಣದಲ್ಲಿ ಇಲ್ಲಿ ಪುಣ್ಯ ಸ್ನಾನ ಮಾಡಿ ಸಂಗಮನಾಥನಿಗೆ ಪೂಜೆ ಸಲ್ಲಿಸುವುದು ಸಂಪ್ರದಾಯ. ಶ್ರಾವಣದಲ್ಲಿ ಕೃಷ್ಣ ಮಲಪ್ರಭೆಯಲ್ಲಿ ಸ್ನಾನ ಮಾಡಿದರೆ ಪಾಪ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿಂದ ಕೂಡಲಸಂಗಮಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಸದ್ಯ ಇಲ್ಲಿ ನೀರಿಲ್ಲದ ಕಾರಣ ನಿರಾಶೆಯಿಂದಲೇ ಹೋಗುತ್ತಿದ್ದಾರೆ ಎಂದು ಶಿರಗುಪ್ಪಿ ಹೇಳುವರು.