ಬೆಂಗಳೂರು: ಶ್ರೀಗಂಧದ ಮರ ಕಳವು ಮಾಡಿ ಆಂಧ್ರದ ತೈಲ ಕಾರ್ಖಾನೆಗೆ ಮಾರಾಟ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಬಂಧಿಸಿರುವ ಯಶವಂತಪುರ ಪೊಲೀಸರು, ರೂ. 50,000 ಮೌಲ್ಯದ ಗಂಧದ ತುಂಡುಗಳು, ಕಾರು ಮತ್ತು ಬೈಕ್ ವಶಪಡಿಸಿಕೊಂಡಿದ್ದಾರೆ.
ನಾಗವಾರದ ಅಮ್ಜದ್ವುಲ್ಲಾ (45), ಥಣಿಸಂದ್ರದ ಮುಜಾಹಿದ್ವುಲ್ಲಾ (19), ಸಾರಾಯಿ ಪಾಳ್ಯದ ಇಮ್ಜಾದ್ ವುಲ್ಲಾ (20), ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಕುಮಾರ (30), ಆಂಧ್ರ ಮೂಲದ ರಮಣ (28), ರಂಗನಾಥ (35) ಬಂಧಿತರು.
ದಿನವಿಡೀ ನಗರವನ್ನು ಸಂಚರಿಸುತ್ತಿದ್ದ ಆರೋಪಿಗಳು, ಸರ್ಕಾರಿ ಕಚೇರಿ, ಮನೆ ಆವರಣ ಸೇರಿದಂತೆ ವಿವಿಧೆಡೆ ಬೆಳೆದಿರುವ ಶ್ರೀಗಂಧದ ಮರಗಳನ್ನು ಗುರುತಿಸಿ ಹೊಂಚು ಹಾಕುತ್ತಿದ್ದರು. ರಾತ್ರಿ ವೇಳೆ ಸ್ಥಳಕ್ಕೆ ಹೋಗಿ ಆ ಮರಗಳನ್ನು ಕಳವು ಮಾಡುತ್ತಿದ್ದರು, ನಂತರ ಅವುಗಳನ್ನು ಆಂಧ್ರಪ್ರದೇಶದ ಅಮರಾಪುರದಲ್ಲಿರುವ ತೈಲ ಕಾರ್ಖಾನೆಯೊಂದಕ್ಕೆ ಮಾರಾಟ ಮಾಡುತ್ತಿದ್ದರು. ಆರೋಪಿಗಳು ಇತ್ತೀಚೆಗೆ ಶ್ರೀಗಂಧದ ಮರ ಕಳವು ಮಾಡುವಾಗ ಗಸ್ತಿನಲ್ಲಿದ್ದ ಸಿಬ್ಬಂದಿಗೆ ಸಿಕ್ಕಿಬಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಬಂಧಿತರ ವಿರುದ್ಧ ಗಂಗಮ್ಮನಗುಡಿ, ಸದಾಶಿವನಗರ, ಜಾಲಹಳ್ಳಿ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.