ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಗಂಧ ರಕ್ಷಣೆಗೆ ಇಲಾಖೆಯಲ್ಲಿಯೇ ನಿರಾಸಕ್ತಿಯೇ?

Last Updated 25 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಶ್ರೀಗಂಧ ಜಪ್ತಿ, ಕಾರು ವಶ~ ಮಲೆನಾಡಿನ ಮಾಮೂಲಿ ಸುದ್ದಿಯಾಗಿದ್ದವು. ಪ್ರತಿನಿತ್ಯ ಒಂದಿಲೊಂ್ಲದು ಘಟನೆ  ಪತ್ತೆಯಾಗುತ್ತಿತ್ತು. ಆರೋಪಿಗಳನ್ನು ಹಿಡಿದು ನ್ಯಾಯಾಲಯಕ್ಕೆ ಒಪ್ಪಿ ಸಲಾಗುತ್ತಿತ್ತು.  ಈಗ ಶ್ರೀಗಂಧ ಕಳ್ಳತನ ನಿತ್ಯವೂ ನಡೆಯುತ್ತಿದೆ. ಅದನ್ನು ತಡೆಯಲು ಸಿಬ್ಬಂದಿ ಆಸಕ್ತಿ ಕಳೆದುಕೊಂಡ ಪರಿಸ್ಥಿತಿಯಿದೆ.
ಶ್ರೀಗಂಧ ಹಿಡಿದಾಗ ಪ್ರಕರಣ ದಾಖಲಿಸಿ  ಆರೋಪಿಗಳನ್ನು  ನ್ಯಾಯಾಲಯಕ್ಕೆ ಹಾಜರು ಪಡಿಸುವುದು ಮುಖ್ಯ ಕೆಲಸ. ಸೆರೆಸಿಕ್ಕ ಆರೋಪಿ ಗಳಿಗೆ ಊಟ,ಚಹದ ವ್ಯವಸ್ಥೆ, ದೂರದ ನ್ಯಾಯಾ ಲಯಕ್ಕೆ ಕರೆದೊಯ್ಯುವ ಖರ್ಚುಗಳಿಗೆ ಹಣ ಬೇಕಾಗುತ್ತದೆ. ಒಂದು ಪ್ರಕರಣ ದಾಖಲಾದರೆ  ಸುಮಾರು 1500-2000ರೂಪಾಯಿ ಖರ್ಚಾಗಬಹುದು.

ಇದನ್ನು  ಇಲಾಖೆ ನೀಡುವದಿಲ್ಲ. ಪ್ರಕರಣ ದಾಖಲಿಸಿದ ಗಾರ್ಡ್, ಫಾರೆಸ್ಟರ್ ಹಾಗೂ ವಲಯ ಅರಣ್ಯಾಧಿಕಾರಿಗಳು ಕಿಸೆಯ ಹಣ ಖರ್ಚುಮಾಡಬೇಕು! ಈ ಹಣವನ್ನು ಮರಳಿ ಪಡೆಯುವದು ಸುಲಭವಲ್ಲ. ಪ್ರವಾಸ ಭತ್ಯೆ, ಪ್ರಕರಣ ವೆಚ್ಚವೆಂದು ಎರಡು ಮೂರು ವರ್ಷಗಳ ಬಳಿಕ 100-125ರೂಪಾಯಿ ದೊರೆಯಬಹುದು! ಸಾವಿರಾರು ರೂಪಾಯಿ ಖರ್ಚು ಮಾಡಿದರೆ ಮರಳಿ ಪಡೆಯುವದು  ಸಾಧ್ಯವಿಲ್ಲವೆಂದು ಅರಿತವರು ಪ್ರಕರಣ ದಾಖಲಿಸಲು ಈಗ ಹಿಂದೆ ಸರಿಯುತ್ತಿದ್ದಾರೆ. ನಿರ್ಲಕ್ಷ್ಯದಿಂದ ಬಯಲು ಖಜಾನೆಯ ಅಮೂಲ್ಯ ಶ್ರೀಗಂಧ ಸೂರೆ ಹೋಗುತ್ತಿದೆ. ಈ ಸಮಸ್ಯೆ ಯನ್ನು ಹಿರಿಯ ಅಧಿಕಾರಿಗಳು ಗಮನಿಸದ ಪರಿಣಾಮ ಲೂಟಿ ಹೆಚ್ಚಿದೆ.

ಹಾಸನ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗಂಧದ ನೈಸರ್ಗಿಕ ಪುನರುತ್ಪತ್ತಿ ಬಹಳ ಚೆನ್ನಾಗಿದೆ. ಆದರೆ ನೂರಕ್ಕೆ ಒಂದು ಗಿಡವೂ ಮರವಾಗಿ ಬೆಳೆಯುವುದಿಲ್ಲ. ಚೋರರ ಕಾರ್ಯಪಡೆ ಎಷ್ಟು ಚುರುಕಾಗಿದೆಯೆಂದರೆ ನಗರ ಮನೆಯ ಕಾಂಪೌಂಡ್ ಒಳಗಡೆಯ ಮರ ವನ್ನು ಲಪಟಾಯಿಸಲು ಪಳಗಿದೆ. ಇನ್ನೊಂದೆಡೆ ಇಲಾಖೆಯವರು ತಮ್ಮನ್ನು  ಹಿಡಿಯುವುದಿಲ್ಲ ಎಂಬ ಅರಿವು ಕಳ್ಳರಲ್ಲಿ ಮೂಡಿದಂತಿದೆ! ಒಮ್ಮೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾದರೂ ಶಿಕ್ಷೆಯಾಗಿದ್ದು ಕಡಿಮೆ. ಅಗತ್ಯ ಸಾಕ್ಷ್ಯ ಒದಗಿಸಲು ಇಲಾಖೆ ಗಮನಹರಿಸುವುದಿಲ್ಲ. ಕಳೆದ 10 ವರ್ಷಗಳ ಶ್ರೀಗಂಧ ಪ್ರಕರಣಗಳ ಪರಿಶೀಲನೆ ನಡೆಸಿದರೆ ಕರ್ನಾಟಕದಲ್ಲಿ ಕಳ್ಳರಿಗೆ ಭಯವಿಲ್ಲ ಎಂಬ ಸತ್ಯ ತಿಳಿಯಬಹುದು!

ಈಗ ಕಿಲೋ ಶ್ರೀಗಂಧಕ್ಕೆ 8-10 ಸಾವಿರ ರೂಪಾಯಿದೆ. ನೈಸರ್ಗಿಕವಾಗಿ  ಬೆಳೆಯುತ್ತಿರುವ ಮರದ ರಕ್ಷಣೆಗೆ  ಇಲಾಖೆ  ಪ್ರಯತ್ನಿಸಬೇಕಿತ್ತು. ಐದು ವರ್ಷ ರಕ್ಷಣೆ ಸರಿಯಾಗಿ ಮಾಡಿದರೆ ಗಂಧದ ಉತ್ಪಾದನೆ ಹೆಚ್ಚುವುದನ್ನು ಗಮನಿಸಬ ಹುದು. ಇಲಾಖೆ ಕಣ್ಮುಚ್ಚಿ ಕುಳಿತಿದ್ದರಿಂದ ಕಾಡಿನಲ್ಲಿ ಕಳ್ಳರು ಹಿಡಿತ ಸಾಧಿಸಿದ್ದಾರೆ. ಉತ್ತರ ಕನ್ನಡದ ಶಿರಸಿ, ಸಿದ್ದಾಪುರ ಪ್ರದೇಶಗಳಲ್ಲಿ ಶ್ರೀಗಂಧ ಕಳ್ಳರನ್ನು ಹಿಡಿದ ಪ್ರಕರಣ ಗಮನಿ ಸಿದರೆ ನೂರು ಪ್ರಕರಣಗಳಲ್ಲಿ 95ರಷ್ಟನ್ನು ಹಳ್ಳಿಗರು ಗುರುತಿಸಿದ್ದು! ಗಿಡ ಕಡಿಯುವಾಗ, ಸಾಗಣೆ ನಡೆಸುವಾಗ ಗಮನಿಸಿದವರು ಇಲಾಖೆಗೆ ಮಾಹಿತಿ ನೀಡಿ ಕಳ್ಳತನ ಹಿಡಿಯಲು ಸಹಕರಿಸುತ್ತಾರೆ.

ಶಿರಸಿ ಹುಲೇಕಲ್ ಅರಣ್ಯ ವಲಯದ ಶಿಗೇಹಳ್ಳಿ, ಸಾಲ್ಕಣಿ, ಓಣಿಕೇರಿ ಭಾಗದ ಜನಗಳಂತೂ ಶ್ರೀಗಂಧ ಕಳ್ಳತನ ತಡೆಗೆ ಸುಮಾರು 20ವರ್ಷಗಳಿಂದ ಶ್ರಮಿಸುತ್ತಿದ್ದಾರೆ. ಇಲ್ಲಿನ ಹಲವರಿಗೆ  ಜೀವ ಬೆದರಿಕೆ ಹಾಕಿದ ಉದಾಹರ ಣೆಗಳಿವೆ. ರಭಸದ ಮಳೆಯಲ್ಲಿ ನಡುರಾತ್ರಿ ಯವರೆಗೂ ಕಾಡಲ್ಲಿ ಅವಿತು ಮರ  ಕಡಿಯುವಾಗ ಜೀವಭಯ ಮರೆತು ಕಳ್ಳರನ್ನು ಹಳ್ಳಿಗರು ಹಿಡಿದಿದ್ದಾರೆ. ಅಗತ್ಯ ಸಾಕ್ಷ್ಯ ಒದಗಿಸಿ ಶಿಕ್ಷೆಯಾಗುವಂತೆ ಶ್ರಮಿಸಲು ಇಲಾಖೆಗೆ  ಗಮನವಿಲ್ಲ. ಈಗ ಶ್ರೀಗಂಧ ಮರಗಳ್ಳರ ವಿರುದ್ಧ ಕೇಸ್ ದಾಖಲಿಸಲು ಕೆಳ ಹಂತದ ಸಿಬ್ಬಂದಿಗಳಲ್ಲಿ  ಮುಂಚಿನ ಉತ್ಸಾಹ ಉಳಿದಿಲ್ಲ.

200ವರ್ಷಗಳ ಹಿಂದಿನ ದಾಖಲೆಗಳಲ್ಲಿ ಬೆಳೆದ ಶ್ರೀಗಂಧದ ಮರಕ್ಕೆ ನಂಬರ್ ಹಾಕುವ ಪದ್ದತಿಯಿತ್ತು! ಇಂದು ರಕ್ಷಣೆಯ ದೃಷ್ಟಿಯಿಂದ ಈ ಕ್ರಮ ಪುನಃ ಆರಂಭಿಸುವ ಅಗತ್ಯವಿದೆ. ಒಮ್ಮೆ ಮರ ಕಟಾವಾದರೆ ಇಲಾಖೆಯು, ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಇದರಿಂದ ಅನುಕೂಲ ವಾಗುತ್ತದೆ. ಇದಲ್ಲದೆ, ವರ್ಷಕ್ಕೆ ಎಷ್ಟು ಮರ ನಾಶವಾಗುತ್ತಿದೆ ಎಂಬ ಲೆಕ್ಕವೂ ದೊರೆಯು ತ್ತದೆ. ಅರಣ್ಯಕಟಾವು, ಅಭಿವೃದ್ಧಿ ಕಾಮಗಾರಿ ಪರಿಶೀಲಿಸುವಾಗ ಶೇಕಡಾ 5ರಷ್ಟನ್ನು ಸ್ವತಃ ಹಿರಿಯ ಅಧಿಕಾರಿ ವೀಕ್ಷಿಸುತ್ತಾರೆ. ಶ್ರೀಗಂಧ ಪ್ರಕರಣಗಳಲ್ಲಿ ಇಂದಿನವರೆಗೂ  ಮಾಧ್ಯಮ ಹೇಳಿಕೆಗಷ್ಟೇ ಜವಾಬ್ದಾರರಾಗಿರುವ ಅಧಿಕಾರಿ ಗಳನ್ನು  ಕಾಡು ತಿರುಗಲು ಇಂದು  ಪ್ರೇರೇಪಿಸ ಬೇಕಿದೆ. ಕಾಡು ತಿರುಗುವ ಅಧಿಕಾರಿಗಳು ನಾಪತ್ತೆಯಾಗಿರುವುದು ಶ್ರೀಗಂಧದ ಮರ  ಸಂರಕ್ಷಣೆ ಸಮಸ್ಯೆ ಹೆಚ್ಚಲು ಮುಖ್ಯ ಕಾರಣವಾಗಿದೆ.

ಸಮಸ್ಯೆ ಗಮನಿಸಿ ರಕ್ಷಣೆಗೆ ಚುರುಕು ಮುಟ್ಟಿಸುವ ಕಾಳಜಿ ಎಲ್ಲಿಯೂ ಕಾಣುತ್ತಿಲ್ಲ. ಮರ ಕಾಯಲು ಸಾಧ್ಯವೇ ಇಲ್ಲ ಎನ್ನುವ ಹಂತಕ್ಕೆ ವ್ಯವಸ್ಥೆ ಕುಸಿದಿದೆ. ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಬೆಂಗಳೂರಿನ ಅರಣ್ಯ ಭವನದಲ್ಲಿ ಕುಳಿತಿರುತ್ತಾರೆ. ಅವರಿಗೆ ಸರ್ಕಾರ ತಿಂಗಳಿಗೆ ಲಕ್ಷಗಟ್ಟಲೆ ವೇತನ ನೀಡುವುದು ಅರಣ್ಯ ರಕ್ಷಣೆಗೆ ಎಂಬುದು ನೆನಪಿರಬೇಕು.

ರಕ್ಷಣೆಯ ಕನಿಷ್ಠ ಕಾಳಜಿ ಇದ್ದರೆ ಅರಣ್ಯ ಭವನ ಬಿಟ್ಟು  ಕೆಳಗಿಳಿದು ಮಲೆನಾಡಿನ ಗುಡ್ಡದಲ್ಲಿ ಓಡಾಡಲು ಬರಬೇಕು. ಸಭೆ, ಸಮಾರಂಭ, ಸೆಮಿನಾರುಗಳಿಗೆ ಬಿಡುವು ನೀಡಿ ಕಾಡಿನ ಅನುಭವ ಪಡೆಯಬೇಕು. ಶ್ರೀಗಂಧ ಮರ ಹೇಗೆ ಬೆಳೆಯುತ್ತಿದೆ? ಹೇಗೆ ಕಡಿಯಲಾಗುತ್ತಿದೆ? ಅದರ ರಕ್ಷಣೆ ಹೇಗೆಂದು ನಿಜವಾದ ಸಮಸ್ಯೆ ಅರಿಯುವ ಆಸಕ್ತಿಯನ್ನು ತೋರಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT