ಯಲಬುರ್ಗಾ: ಪಟ್ಟಣದ ಶ್ರೀಧರ ಮುರಡಿ ಹಿರೇಮಠದ 9ನೇ ಸ್ಥಿರಪಟ್ಟದ ಪೀಠಾಧಿಕಾರಿಗಳಾದ ಬಸವಲಿಂಗೇಶ್ವರ ಸ್ವಾಮೀಜಿಯ ಏಕಾದಶ ಪೀಠಾರೋಹಣ ಅಂಗವಾಗಿ ಮೂರುದಿನಗಳ ಕಾಲ ಆಯೋಜಿಸಿದ್ದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭಾನುವಾರ ಚಾಲನೆ ದೊರೆಯಿತು.
ಬುದ್ಧ ಬಸವ ಅಂಬೇಡ್ಕರ್ ಭವನದ ಆವರಣದಲ್ಲಿರುವ ಈಶ್ವರ ದೇವಸ್ಥಾನದಿಂದ ಹೊರಟ ಲಿ. ಶ್ರೀಗಳ ಮೂರ್ತಿಯ ಮೆರವಣಿಗೆಯ ಉದ್ಘಾಟನೆಯಲ್ಲಿ ಜೆಡಿಎಸ್ ಮುಖಂಡ ಜಿ.ಟಿ. ಪಂಪಾಪತಿ, ಶಾಸಕ ಈಶಣ್ಣ ಗುಳಗಣ್ಣವರ, ಮಾಜಿ ಸಂಚಿವ ಬಸವರಾಜ ರಾಯರೆಡ್ಡಿ, ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್, ಬಿಎಸ್ಆರ್ ಕಾಂಗ್ರೆಸ್ ಮುಖಂಡ ಕುಮಾರ ಗುಳಗಣ್ಣವರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ರಾಜಸ್ಥಾನ ಗ್ರಾನೈಟ್ ಶಿಲೆಯಿಂದ ನಿರ್ಮಾಣಗೊಂಡ ಶ್ರೀಗಳ ಮೂರ್ತಿಯ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯ ಮೇಳ, ಕುಂಭ ಮೇಳ, ಸವಡಿಯ ಚೌಡೇಶ್ವರ ಭಜನಾ ಮೇಳ, ಮಕ್ಕಳ ಡೊಳ್ಳು ಮೇಳ ಹಾಗೂ ಮಹಿಳೆಯರ ಆರತಿಯೊಂದಿಗೆ ಸಡಗರ ಸಂಭ್ರಮದಿಂದ ನೆರವೇರಿಸಿ ನಂತರ ಶ್ರೀಮಠದಲ್ಲಿ ಪ್ರತಿಷ್ಠಾಪಿಸಲಾಯಿತು.
ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ, ಜಿಗೇರಿಯ ಗುರುಸಿದ್ಧೇಶ್ವರ ಸ್ವಾಮೀಜಿ, ಹಾಗೂ ಗುಳೆದಗುಡ್ಡದ ಒಪ್ಪತ್ತೇಶ್ವರಮಠದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ನಂತರ ಶ್ರೀಮಠದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಅನೇಕ ಗಣ್ಯರು, ವಿವಿಧ ಮಠಾಧೀಶರು, ರಾಜಕೀಯ ಧುರೀಣರು ಭಾಗವಹಿಸಿದ್ದರು. ನಂತರ ಅನ್ನಸಂತರ್ಪಣೆ ಜರುಗಿತು.