ಚೆನ್ನೈ (ಪಿಟಿಐ): ನಿರೀಕ್ಷೆಯಂತೆಯೇ ಎನ್ ಶ್ರೀನಿವಾಸನ್ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಎಲ್ಲಾ ಕುತೂಹಲಗಳಿಗೆ ತೆರೆ ಎಳೆದಿದ್ದಾರೆ
ತೀವ್ರ ಗೊಂದಲಗಳ ನಡುವೆಯೂ ಭಾನುವಾರ ನಡೆದ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಎನ್ ಶ್ರೀನಿವಾಸನ್ ಅವರು ಸತತ ಮೂರನೇ ಬಾರಿಗೆ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ದಕ್ಷಿಣ ವಲಯದ ಪ್ರತಿನಿಧಿಗಳು ಅಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸನ್ ಹೆಸರನ್ನು ಮಾತ್ರ ನಾಮನಿರ್ದೇಶನ ಮಾಡಿದ್ದು, ಅವಿರೋಧ ಆಯ್ಕೆಗೆ ಕಾರಣವಾಯಿತು. ಆದರೆ ಸುಪ್ರೀಂ ಕೋರ್ಟ್ನ ಮುಂದಿನ ಆದೇಶದವರೆಗೂ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವಂತಿಲ್ಲ.
ಪ್ರಮುಖ ರಾಜಕೀಯ ಬೆಳವಣಿಗೆ ಎಂಬಂತೆ ಬಿಸಿಸಿಐ ಉಪಾಧ್ಯಕ್ಷ ಸ್ಥಾನದ ಬದಲಾವಣೆಯಾಗಿದೆ. ಅರುಣ್ ಜೇಟ್ಲಿ ಅವರ ಬದಲಾಗಿ ಉತ್ತರ ವಲಯದಿಂದ ಸ್ನೇಹ್ ಬನ್ಸಲ್ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಇನ್ನು ಬಿಸಿಸಿಐ ಖಜಾಂಚಿಯಾಗಿ ಹರಿಯಾಣ ಕ್ರಿಕೆಟ್ ಅಸೋಸಿಯೇಶನ್ ಮುಖ್ಯಸ್ಥ ಅನಿರುದ್ಧ್ ಚೌಧರಿ ಅವರು ಆಯ್ಕೆಯಾಗಿದ್ದಾರೆ.