ಶ್ರೀರಂಗಪಟ್ಟಣ: ಈದ್ ಮಿಲಾದ್ ಆಚರಣೆ ಹಿನ್ನೆಲೆಯಲ್ಲಿ ಪಟ್ಟಣದ ಟಿಪ್ಪು ಸುಲ್ತಾನ್ ಮಸೀದಿಯಲ್ಲಿ ಬುಧವಾರ ಮಹಮದ್ ಪೈಗಂಬರರ ಪಾದುಕೆ ದರ್ಶನ ಹಾಗೂ ಪನ್ನೀರು ವಿತರಣೆ ನಡೆಯಿತು.ಮಸೀದಿಯ ಮೊದಲ ಮಹಡಿಯಲ್ಲಿ ಇರಿಸಲಾಗಿದ್ದ ಮಹಮದ್ ಪೈಗಂಬರರ ಪಾದುಕೆ ಅಚ್ಚು ಇರುವ ಪವಿತ್ರ ಶಿಲೆಗಳನ್ನು ದರ್ಶನಕ್ಕೆ ಇಡಲಾಗಿತ್ತು. ಪಾದುಕೆ ದರ್ಶನಕ್ಕೆ ಆಗಮಿಸಿದ್ದವರಿಗೆ ಪನ್ನೀರು ಪ್ರಸಾದ ವಿತರಿಸಲಾಯಿತು.
ಟಿಪ್ಪು ಸುಲ್ತಾನ್ ಆಸ್ಥಾನಕ್ಕೆ ಭೇಟಿ ನೀಡಿದ್ದ ಸಿರಿಯಾ ಬಾದ್ಶಹ ಜ್ಞಾಪಕಾರ್ಥವಾಗಿ ನೀಡಿದ್ದ ಮಹಮದ್ ಪೈಗಂಬರರ ಗಡ್ಡದ ಕೇಶವನ್ನು ಇಲ್ಲಿ ಸಂರಕ್ಷಿಸಲಾಗಿದೆ. ಮಸೀದಿಗೆ ಆಗಮಿಸಿದ್ದವರು ಈ ಕೇಶಕ್ಕೆ ಸಾಮೂಹಿಕ ನಮನ ಸಲ್ಲಿಸಿದರು.1765ರಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಟರ್ಕಿ ಸುಲ್ತಾನ ಗುಂಬಸ್ಗೆ ಕಪ್ಪು ಪಿಲ್ಲರ್ಗಳು ಹಾಗೂ ಚಾದರವನ್ನು ಕೊಡುಗೆ ನೀಡಿದ್ದಾರೆ ಎಂದು ಸಮಿವುಲ್ಲಾ ಷರೀಫ್ ಸ್ಮರಿಸಿಕೊಂಡರು.
ಬೆಂಗಳೂರು, ಮೈಸೂರು, ಮಂಡ್ಯ ಇತರೆಡೆಗಳಿಂದ ಮುಸ್ಲಿಂ ಬಾಂಧವರು ಆಗಮಿಸಿ ಪೈಗಂಬರರ ಪಾದುಕೆ ಹಾಗೂ ಕೇಶ ದರ್ಶನ ಪಡೆದರು. ಟಿಪ್ಪು ವಕ್ಫ್ ಎಸ್ಟೇಟ್ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸಯ್ಯದ್ ನಿಜಾಂ ಅಲಿ, ಜಿಲ್ಲಾಧ್ಯಕ್ಷ ಮಜರ್ಪಾಷ, ಸ್ಥಳೀಯ ಧರ್ಮಗುರು ಸಯ್ಯದ್ ಅಬ್ಬಾಸ್, ಯಾಕತ್ ಅಲಿ, ಸಯ್ಯದ್ ಗೌಸ್, ಗುಲ್ಜಾರ್ ಪಾಷ ಇತರ ಪ್ರಮುಖರು ಪಾಲ್ಗೊಂಡಿದ್ದರು.