ತುಮಕೂರು: ವಾಲ್ಮೀಕಿ ಮಹರ್ಷಿ ರಾಮಾಯಣದಲ್ಲಿ ಶ್ರೀರಾಮನನ್ನು ದೇವರು ಎಂದು ಬಿಂಬಿಸಿಲ್ಲ. ರಾಮಾಯಣದಲ್ಲಿ ಶ್ರೀರಾಮನಿಗಿಂತಲೂ ಹೆಚ್ಚಿನ ಒತ್ತನ್ನು ಸಾಮಾನ್ಯರಿಗೆ ನೀಡಿದ್ದಾರೆ. ಆದರೆ ಇಂದು ಶ್ರೀರಾಮನನ್ನು ದೇವರು ಎಂಬಂತೆ ಬಿಂಬಿಸಲಾಗಿದೆ. ಇದನ್ನು ಪ್ರಶ್ನಿಸುವಂಥ ಪರಿಸ್ಥಿತಿ ಇಲ್ಲದಂತೆ ಮಾಡಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಆತಂಕ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಆಯೋಜಿಸಿದ್ದ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದ ಅವರು, ರಾಮನನ್ನು ದೇವರು ಮಾಡುವ ಉದ್ದೇಶ ವಾಲ್ಮೀಕಿಗೆ ಇರಲಿಲ್ಲ. ರಾಮನನ್ನು ಒಬ್ಬ ಆದರ್ಶ ವ್ಯಕ್ತಿಯಾಗಿ ಮಾತ್ರ ರೂಪಿಸಿದ್ದರು. ರಾಮಾಯಣದ ವಿರುದ್ಧ ಚಿಂತನೆ ಮಾಡಬೇಕಾದ ಅಗತ್ಯವಿದೆ ಎಂದರು.
ಆಯಾಯ ಸಮುದಾಯದ ಮಹನೀಯರ ದಿನಾಚರಣೆಯನ್ನು ಆಯಾಯ ಸಮುದಾಯವೇ ಆಚರಿಸುವುದು ನಿಲ್ಲಬೇಕು. ದಲಿತರು ಮಾತ್ರವೇ ಅಂಬೇಡ್ಕರ್ ದಿನಾಚರಣೆ ಆಚರಿಸುವುದು, ಬೇಡರು ಮಾತ್ರವೇ ವಾಲ್ಮೀಕಿ ದಿನಾಚರಣೆ ಆಚರಿಸುವಂಥ ಪರಿಪಾಠ ತಪ್ಪಬೇಕು.ಇಂಥ ಕಾರ್ಯಕ್ರಮಗಳನ್ನು ಎಲ್ಲ ಸಮುದಾಯದವರು ಹಬ್ಬದಂತೆ ಆಚರಿಸಬೇಕು.