ಬೆಂಗಳೂರು: ಬಿಎಸ್ಆರ್ ಕಾಂಗ್ರೆಸ್ ಸ್ಥಾಪಕ, ಪಕ್ಷೇತರ ಶಾಸಕ ಬಿ. ಶ್ರೀರಾಮುಲು ಅವರು ಇದೇ 29ರಿಂದ ಆಗಸ್ಟ್ 5ರವರೆಗೆ `ಸ್ವಾಭಿಮಾನಿ ಸಂಕಲ್ಪ ಯಾತ್ರೆ~ ಕೈಗೊಳ್ಳಲಿದ್ದಾರೆ. ಈ `ಯಾತ್ರೆ~ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಆರಂಭವಾಗಿ ರಾಮನಗರದಲ್ಲಿ ಕೊನೆಗೊಳ್ಳಲಿದೆ.
ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶ್ರೀರಾಮುಲು, `ಯಾತ್ರೆ 1,300 ಕಿ.ಮೀ. ಕ್ರಮಿಸಲಿದೆ, 45 ವಿಧಾನಸಭಾ ಕ್ಷೇತ್ರಗಳ ಮೂಲಕ ಹಾದುಹೋಗಲಿದೆ. ಕರಾವಳಿ, ಮಲೆನಾಡು ಭಾಗದ ಜನರನ್ನು ಕಾಡುತ್ತಿರುವ ಸಮಸ್ಯೆ ಅರ್ಥಮಾಡಿಕೊಳ್ಳುವ ಉದ್ದೇಶದಿಂದ ಈ ಯಾತ್ರೆ ಹಮ್ಮಿಕೊಂಡಿದ್ದೇನೆ~ ಎಂದರು.
ಕುಮಟಾ, ಸೊರಬ, ಶಿವಮೊಗ್ಗ, ಕಡೂರು, ಹಾಸನ, ಚಿಕ್ಕಮಗಳೂರು, ಉಡುಪಿ, ಮಂಗಳೂರು, ಪುತ್ತೂರು, ಮಡಿಕೇರಿ, ಮೈಸೂರು, ಚಾಮರಾಜನಗರ, ಮಂಡ್ಯ, ಚನ್ನಪಟ್ಟಣ ಮೂಲಕ ಈ ಯಾತ್ರೆ ಸಾಗಲಿದೆ. ಮಂಗಳೂರು, ಮಡಿಕೇರಿ, ಮೈಸೂರು, ಚಾಮರಾಜನಗರ, ರಾಮನಗರಗಳಲ್ಲಿ ಸಾರ್ವಜನಿಕ ಸಮಾರಂಭ ಆಯೋಜಿಸಲಾಗುವುದು ಎಂದರು.
ಬಸವಕಲ್ಯಾಣದಿಂದ ಬೆಂಗಳೂರಿನವರೆಗೆ ನಡೆಸಿದ ಪಾದಯಾತ್ರೆಯ ಅನುಭವ, ಅಲ್ಲಿನ ಜನ ಅನುಭವಿಸುತ್ತಿರುವ ಸಂಕಷ್ಟ ಕುರಿತು ಪುಸ್ತಕ ಬರೆಯುವ ಚಿಂತನೆ ಇರುವುದಾಗಿ ಶ್ರೀರಾಮುಲು ಹೇಳಿದರು.