ಬೆಂಗಳೂರು: ಶಾಸಕರನ್ನು ಅನರ್ಹಗೊಳಿಸುವ ಸಂದರ್ಭದಲ್ಲಿ ಎಲ್ಲ ಅಗತ್ಯ ಕ್ರಮಗಳನ್ನೂ ತರಾತುರಿಯಲ್ಲಿ ತೆಗೆದುಕೊಂಡಿದ್ದ ವಿಧಾನಸಭೆಯ ಸ್ಪೀಕರ್ ಕೆ.ಜಿ. ಬೋಪಯ್ಯ ಅವರು ಬಿ. ಶ್ರೀರಾಮುಲು ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ನಾಲ್ಕು ದಿನ ಕಳೆದಿದ್ದರೂ ಅದನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಕೆಲಸ ಮಾಡದಿರುವುದು ಏಕೆ ಎಂದು ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಪ್ರೊ.ಬಿ.ಕೆ. ಚಂದ್ರಶೇಖರ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವರು, `ಶ್ರೀರಾಮುಲು ಅವರು ಖುದ್ದಾಗಿ ರಾಜೀನಾಮೆ ಸಲ್ಲಿಸಿದ್ದರೂ ಅದರ ಕುರಿತು ಇನ್ನೂ ಕ್ರಮ ತೆಗೆದುಕೊಳ್ಳದ ಬೋಪಯ್ಯ ಅವರ ವರ್ತನೆಯನ್ನು ನಾಡಿನ ಜನ ಗಮನಿಸುತ್ತಿದ್ದಾರೆ~ ಎಂದರು.