ಬಳ್ಳಾರಿ: ಶಾಸಕ ಬಿ. ಶ್ರೀರಾಮುಲು ಅವರ ಹೊಸ ಪಕ್ಷ ರಚನೆಯ ಬಗ್ಗೆ ರಾಜ್ಯದಾದ್ಯಂತ ಕುತೂಹಲ ಇರುವ ಸಂದರ್ಭದಲ್ಲೇ ಅವರ ಇಲ್ಲಿನ ಕಚೇರಿಯಲ್ಲಿ ಶನಿವಾರ ದಿಢೀರನೆ ಕಾಣಿಸಿಕೊಂಡ ಬ್ಯಾನರ್ ಒಂದು ಅದಕ್ಕೆ ಉತ್ತರ ನೀಡುವಂತಿದೆ.
ಆ ಬ್ಯಾನರ್ನಲ್ಲಿ ಪಕ್ಷದ ಹೆಸರು, ಚಿಹ್ನೆ ಮತ್ತು ಘೋಷವಾಕ್ಯವನ್ನು ಬರೆಯಲಾಗಿದೆ. ಬೊಗಸೆ ಕೈ ನಡುವೆ ಬಡವ, ಶ್ರಮಿಕ ಮತ್ತು ರೈತನ ಚಿತ್ರಗಳಿವೆ. ಅದರ ಕೆಳಭಾಗದಲ್ಲಿ ಬಿಎಸ್ಆರ್ ಎಂದು ಬರೆಯಲಾಗಿದೆ. `ಸ್ವಾಭಿಮಾನದೊಂದಿಗೆ ಬದುಕೋಣ~ ಎಂಬುದು ಅದರಲ್ಲಿರುವ ಘೋಷವಾಕ್ಯ.
ಶ್ರೀರಾಮುಲು ಅವರು ಇದುವರೆಗೆ ಎಲ್ಲಿಯೂ ತಮ್ಮ ಹೊಸ ಪಕ್ಷದ ಹೆಸರಾಗಲಿ ಇತರ ವಿವರಗಳನ್ನು ತಿಳಿಸಿಲ್ಲ. ಸಂಕ್ರಾಂತಿ ನಂತರವೇ ಅದನ್ನು ಬಹಿರಂಗ ಮಾಡುವುದಾಗಿ ಹೇಳಿದ್ದರು. ಈ ನಡುವೆ ಶನಿವಾರ ಇದ್ದಕ್ಕಿದ್ದಂತೆ ಬ್ಯಾನರ್ ಪ್ರತ್ಯಕ್ಷವಾಗಿದೆ.
ಗಣಿ ಹಗರಣದ ಆರೋಪದ ಮೇಲೆ ಜೈಲಿನಲ್ಲಿರುವ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಅವರ ಜಾಮೀನು ಅರ್ಜಿಯ ವಿಚಾರಣೆ ಜ. 5ರಂದು ನಡೆದಿತ್ತು. ಆ ದಿನ ಅವರಿಗೆ ಜಾಮೀನು ದೊರೆತಿದ್ದರೆ ಸಂಕ್ರಾಂತಿಯ ದಿನದಂದು ಪಕ್ಷದ ಅಧಿಕೃತ ಘೋಷಣೆ ಮಾಡುತ್ತಿದ್ದರು. ಆದರೆ ಜಾಮೀನು ಅರ್ಜಿಯ ವಿಚಾರಣೆ ಜ. 23ಕ್ಕೆ ಮುಂದೂಡಿದ ಹಿನ್ನೆಲೆಯಲ್ಲಿ ಘೋಷಣೆ ವಿಳಂಬವಾಗಬಹುದು ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬಂದಿದೆ.