ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ತಂಡವು ವಿಶ್ವಕಪ್ ಗೆಲ್ಲಲಿ; ಮತ್ತೆ ನಾಣ್ಯ ಟಂಕಿಸುವ ಕಾಲ ಬರಲಿ...! ಇದು ಭಾರತದ ನೆರೆಯ ದ್ವೀಪ ರಾಷ್ಟ್ರದ ಹಣಕಾಸು ಸಚಿವಾಲಯದ ಆಶಯ.
ಹೌದು; ಕ್ರಿಕೆಟ್ಗೂ ನಾಣ್ಯ ಟಂಕಿಸುವುದಕ್ಕೂ ಏನು ಸಂಬಂಧ ಎನ್ನುವ ಪ್ರಶ್ನೆ ಮನದಲ್ಲಿ ಪುಟಿದೇಳುವುದು ಸಹಜ. ಹೌದು; 1996ರಲ್ಲಿ ಅರ್ಜುನ ರಣತುಂಗ ನೇತೃತ್ವದಲ್ಲಿ ಲಂಕಾ ತಂಡವು ವಿಶ್ವಕಪ್ ಗೆದ್ದು ತಂದಾಗ ವಿಜೇತರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಸರ್ಕಾರವು ನಾಣ್ಯಗಳನ್ನು ಬಿಡುಗಡೆ ಮಾಡಿತ್ತು.
ರಣತುಂಗ ಪಡೆಯು ಚಾಂಪಿಯನ್ ಆದ ಮರುವರ್ಷ ದಿಂದ ಮೂರು ಕಂತುಗಳಲ್ಲಿ ಐದು ರೂಪಾಯಿ ಮೌಲ್ಯದ ಹತ್ತು ಕೋಟಿ ನಾಣ್ಯಗಳನ್ನು ಬಿಡುಗಡೆಗೊಳಿಸಿತ್ತು. ಈ ಬಾರಿ ಕುಮಾರ ಸಂಗಕ್ಕಾರ ನೇತೃತ್ವದಲ್ಲಿ ಲಂಕಾ ವಿಶ್ವಕಪ್ ಗೆದ್ದು ತಂದರೆ ಅದಕ್ಕೂ ಹೆಚ್ಚಿನ ಮೌಲ್ಯದ ನಾಣ್ಯ ಹಾಗೂ ನೋಟ್ಗಳನ್ನು ಬಿಡುಗಡೆ ಮಾಡುವುದು ಉದ್ದೇಶವಾಗಿದೆ.
ಲಂಕಾ ನಾಣ್ಯ ಹಾಗೂ ನೋಟುಗಳ ಗುಣಮಟ್ಟವನ್ನು ಹೆಚ್ಚಿಸಲು ಇಲ್ಲಿನ ಹಣಕಾಸು ಸಚಿವಾಲಯ ಚಿಂತನೆ ನಡೆಸಿದೆ. ಒಳ್ಳೆ ಗುಣಮಟ್ಟದ ಕಾಗದದಲ್ಲಿ ನೋಟು ಹಾಗೂ ಬೆಲೆಗೆ ತಕ್ಕದಾದ ಗಾತ್ರ ಮತ್ತು ವಿನ್ಯಾಸದಲ್ಲಿ ನಾಣ್ಯವನ್ನು ಹೊರತರಲಿದೆ. ಆ ಕೆಲಸ ಆರಂಭವಾಗುವ ಹೊತ್ತಿಗೆಯೇ ‘ಸಂಗಾ’ ಬಳಗವು ವಿಶ್ವ ಚಾಂಪಿಯನ್ ಆದರೆ, ಗೆದ್ದ ತಂಡಕ್ಕೆ ದೇಶದ ನಾಣ್ಯ ಹಾಗೂ ನೋಟ್ನಲ್ಲಿ ಕಾಣಿಸಿಕೊಳ್ಳುವ ಅವಕಾಶ.
ನಾವು ಮತ್ತೆ ವಿಶ್ವಕಪ್ ನೆನಪಿನಲ್ಲಿ ನಾಣ್ಯ ಬಿಡುಗಡೆ ಮಾಡಿ ಸಂಭ್ರಮಿ ಸುವ ಅವಕಾಶ ಸಿಗಬೇಕು ಎನ್ನುವುದು ಹಣಕಾಸು ಸಚಿವಾಲಯದ ಕಾರ್ಯದರ್ಶಿ ಡಾ. ಪಿ.ಬಿ.ಜಯಸುಂದರಾ ಅವರು ಆಶಯ!