ಚೆನ್ನೈ (ಪಿಟಿಐ): ಶ್ರೀಲಂಕಾದಲ್ಲಿರುವ ತಮಿಳು ಸಮುದಾಯದವರ ಪುನರ್ವಸತಿಗೆ `ಗರಿಷ್ಠ ಹಾಗೂ ಹೆಚ್ಚಿನ ಆದ್ಯತೆ~ಯನ್ನು ಭಾರತ ನೀಡಲಿದೆ ಮತ್ತು `ಭವಿಷ್ಯ~ದಲ್ಲಿ ಇದನ್ನು ಕಾರ್ಯಗತಗೊಳಿಸಲು ಕೊಲಂಬೊವನ್ನು ಅದರಲ್ಲಿ ತೊಡಗಿಸುವುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ಶ್ರೀಲಂಕಾ ತಮಿಳರ ವಿಷಯಕ್ಕೆ ಸಂಬಂಧಿಸಿದಂತೆ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರಿಗೆ ಆಗಸ್ಟ್ 20 ರಂದು ಪತ್ರ ಬರೆದಿದ್ದು, ಅದರಲ್ಲಿ ಈ ವಿಷಯವನ್ನು ಪ್ರಧಾನಿ ಪುನರ್ ಪ್ರಸ್ತಾಪಿಸಿದ್ದಾರೆ. ಅಲ್ಲಿನ ಸಂಘರ್ಷ ಮುಗಿದಿರುವುದರಿಂದ ತಮಿಳು ನಾಗರಿಕರ ಕಲ್ಯಾಣ ಮತ್ತು ಯೋಗಕ್ಷೇಮಕ್ಕಾಗಿ ನವದೆಹಲಿ ಗಮನ ಹರಿಸಲಿದೆ ಎಂದು ಪ್ರಧಾನಿ ಹೇಳಿದ್ದಾರೆ.
`ಅಲ್ಲಿನ ತಮಿಳು ಸಮುದಾಯದವರಿಗೆ ಪುನರ್ವಸತಿಯನ್ನು ಕಲ್ಪಿಸುವುದು ನಮ್ಮ ಸರ್ಕಾರದ ಮಹತ್ವವಾದ, ಪ್ರಮುಖ ಮತ್ತು ಪ್ರಥಮ ಆದ್ಯತೆಯಾಗಿದೆ~ ಎಂದು ಸಿಂಗ್ ಅವರು ಪ್ರಸ್ತಾಪಿಸಿರುವ ವಿಷಯದ ಪತ್ರ ಮಂಗಳವಾರ ಸುದ್ದಿ ಮಾಧ್ಯಮ ಸಂಸ್ಥೆಗಳಿಗೆ ಬಿಡುಗಡೆಯಾಗಿದೆ.