ವಿಶ್ವಸಂಸ್ಥೆ (ಪಿಟಿಐ): ವಿಶ್ವಸಂಸ್ಥೆಯಲ್ಲಿ ಶ್ರೀಲಂಕಾದ ಉಪ ರಾಯಭಾರಿಯಾಗಿರುವ ನಿವೃತ್ತ ಸೇನಾಧಿಕಾರಿ ಶಾವೇಂದ್ರ ಸಿಲ್ವಾ ಅವರನ್ನು ಶಾಂತಿಪಾಲನಾ ಸಮಿತಿಯಿಂದ ದೂರಕ್ಕೆ ಇಡಲಾಗಿದೆ.
ಶಾಂತಿಪಾಲನಾ ಸಮಿತಿಯ ಸಭೆಗಳಲ್ಲಿ ಪಾಲ್ಗೊಳ್ಳದಂತೆ ಸಮಿತಿಯ ಅಧ್ಯಕ್ಷೆ ಲೂಸಿ ಫ್ರೆಚೆಟ್ ಅವರು ಸಿಲ್ವಾ ಅವರಿಗೆ ಸೂಚಿಸಿದ್ದಾರೆ.
ಶ್ರೀಲಂಕಾ ಸೇನೆ ಎರಡು ವರ್ಷಗಳ ಹಿಂದೆ ತಮಿಳು ಬಂಡುಕೋರರ ಜತೆ ಯುದ್ಧ ಮಾಡುತ್ತಿದ್ದಾಗ ಸಿಲ್ವಾ ಆ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಸಂದರ್ಭದಲ್ಲಿ ಲಂಕಾ ಸೇನೆ ತಮಿಳು ನಾಗರಿಕರ ಮೇಲೆ ಹಿಂಸಾಚಾರ ನಡೆಸಿ, ಮಾನವ ಹಕ್ಕು ದಮನಗೊಳಿಸಿತ್ತು ಎಂಬ ಆರೋಪ ಕೇಳಿಬಂದಿತ್ತು.
ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗೆ ಸೈನಿಕರನ್ನು ಕಳುಹಿಸುವ ದೇಶಗಳಿಗೆ ಹಣ ಪಾವತಿಸುವ ಹೊಣೆ ಹೊತ್ತ 10 ಜನರ ಸಮಿತಿಗೆ ಸಿಲ್ವಾ ಅವರನ್ನು ನೇಮಿಸಲಾಗಿತ್ತು. ಈ ಸಮಿತಿಯ ಅರ್ಧದಷ್ಟು ಜನರನ್ನು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ -ಕಿ-ಮೂನ್ ನಿಯೋಜಿಸಿದರೆ, ಇನ್ನುಳಿದವರ ಹೆಸರನ್ನು ಪ್ರಾಂತೀಯ ಕೂಟಗಳು ಸೂಚಿಸುತ್ತಿದ್ದವು. ಏಷ್ಯಾ ಪೆಸಿಫಿಕ್ ಕೂಟದಿಂದ ಶಾವೇಂದ್ರ ಸಿಲ್ವಾ ಹೆಸರು ಸೂಚಿಸಲಾಗಿತ್ತು.
ಇತರ ಸಲಹಾ ಸಮಿತಿಗಳ ಸದಸ್ಯರ ಜತೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಶಾಂತಿಪಾಲನಾ ಸಮಿತಿಯ ಸಭೆಯಲ್ಲಿ ಸಿಲ್ವಾ ಭಾಗವಹಿಸುವುದು ಸೂಕ್ತವಲ್ಲ. ಇದರಿಂದ ಈ ಸಮಿತಿಯ ಉದ್ದೇಶ ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಲೂಸಿ ಫ್ರೆಚೆಟ್ ಹೇಳಿದ್ದಾರೆ. ಮಾನವ ಹಕ್ಕು ಸಂಘಟನೆಯಾದ `ಹ್ಯೂಮನ್ ರೈಟ್ಸ್ ವಾಚ್~ ಈ ಬೆಳವಣಿಗೆಯನ್ನು ಸ್ವಾಗತಿಸಿದೆ.