ಬೆಂಗಳೂರು: `ಆಧುನಿಕ ಕಾಲದಲ್ಲಿ ಮಹಿಳೆಯರು ಗಂಭೀರ ಸ್ವರೂಪದ ರಾಜಕೀಯ, ಆರ್ಥಿಕ ಮತ್ತು ಲೈಂಗಿಕ ಶೋಷಣೆಗಳನ್ನು ಎದುರಿಸುತ್ತಿದ್ದು, ಸೂಕ್ತ ಪರಿಹಾರ ಕಂಡುಹಿಡಿಯಬೇಕಿದೆ~ ಎಂದು ಮಾಜಿ ಸಚಿವೆ ರಾಣಿ ಸತೀಶ್ ಅಭಿಪ್ರಾಯಪಟ್ಟರು.
ವಿಮೆನ್ಸ್ ವಾಯ್ಸ ಸಂಘಟನೆಯು ನಗರದಲ್ಲಿ ಗುರುವಾರ ಆಯೋಜಿಸಿದ್ದ ಮಹಿಳಾ ಚಳವಳಿಗಳ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು.
`ಮಹಿಳೆಯ ಬದುಕುವ ಹಕ್ಕನ್ನೇ ಕಸಿದುಕೊಳ್ಳುತ್ತಿರುವ ಭ್ರೂಣ ಹತ್ಯೆಯಂತಹ ಸಮಸ್ಯೆಗಳು ನಿಜಕ್ಕೂ ಮನಕಲಕುತ್ತವೆ. ಗ್ರಾಮೀಣ ಭಾಗದಲ್ಲಿರುವ ಶಾಲೆಳಲ್ಲಿ ಶೌಚದ ವ್ಯವಸ್ಥೆಯಿಲ್ಲದೇ ಇರುವುದರಿಂದ ಹೆಣ್ಣುಮಕ್ಕಳು ಶಾಲೆಯನ್ನೇ ತೊರೆಯುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು~ ಎಂದು ಒತ್ತಾಯಿಸಿದರು.
`ಮಹಿಳೆಯರು ಪ್ರಜಾಪ್ರಭುತ್ವದ ಎಲ್ಲ ಪ್ರಕ್ರಿಯೆಗಳಲ್ಲಿ ಸಮರ್ಪಕವಾಗಿ ತೊಡಗಿಸಿಕೊಳ್ಳಬೇಕು. ರಾಜಕೀಯವಾಗಿ ಸಂಘಟಿತರಾಗದೇ ಹೋದರೆ ಸರ್ಕಾರದಿಂದ ಯಾವುದೇ ಸೌಲಭ್ಯವನ್ನು ಹೊಂದಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಮಹಿಳೆಯರು ಚಿಂತಿಸುವ ಅಗತ್ಯವಿದೆ. ಮಹಿಳಾ ಮತ್ತು ಮಕ್ಕಳ ರಕ್ಷಣೆಗಾಗಿ ಹಲವು ಕಾನೂನಗಳಿದ್ದರೂ ಅದು ಸೂಕ್ತ ಜಾರಿಯಾಗದಿರುವುದು ಬೇಸರದ ಸಂಗತಿ~ ಎಂದರು.
ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್, `ಎಲ್ಲ ಸಮಸ್ಯೆಗಳ ವಿರುದ್ಧ ಮಹಿಳೆಯರು ಸಂಘಟಿತರಾಗಿ ಹೋರಾಡಬೇಕು. ಸರ್ಕಾರದ ಸವಲತ್ತುಗಳ ಕುರಿತು ಅರಿವು ಬೆಳೆಸಿಕೊಳ್ಳಬೇಕು~ ಎಂದು ಸಲಹೆ ಮಾಡಿದರು.
ಸಂಘಟನೆಯ ಅಧ್ಯಕ್ಷೆ ರೂತ್ ಮನೋರಮಾ, `ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಖರ್ಚು ಮಾಡುವ ಹಣದಲ್ಲಿ ಒಂದು ಪಾಲು ಮೊತ್ತವನ್ನು ಮಹಿಳಾ ಪರ ಕಾರ್ಯಕ್ರಮಗಳಿಗೆ ವಿನಿಯೋಗಿಸಬೇಕು. ಇದಲ್ಲದೇ ಸರ್ಕಾರ ಮಹಿಳಾ ಪರ ಯೋಜನೆಗಳನ್ನು ಹಮ್ಮಿಕೊಳ್ಳಬೇಕು~ ಎಂದು ಒತ್ತಾಯಿಸಿದರು.
ಹಿರಿಯ ವಕೀಲರಾದ ಪ್ರಮೀಳಾ ನೇಸರ್ಗಿ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಇದ್ದರು.