ಬೆಂಗಳೂರು: `ಕುವೆಂಪು ಮತ್ತು ಚಂದ್ರಶೇಖರ ಕಂಬಾರರಂತಹ ಶೂದ್ರ ಸಾಹಿತಿಗಳು ತಮ್ಮ ಕೃತಿಯ ಮೂಲಕ ವಿಶ್ವಭಾತೃತ್ವವನ್ನು ಜಗತ್ತಿಗೆ ಸಾರಿದರು~ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಎಸ್. ಆರ್.ನಾಯಕ್ ಅಭಿಪ್ರಾಯಪಟ್ಟರು.
ಭಾರತ ಯುವಕೇಂದ್ರವು ನಗರದಲ್ಲಿ ಶನಿವಾರ ಆಯೋಜಿಸಿದ್ದ ಸಂಕ್ರಾಂತಿ ಸ್ವಾಗತೋತ್ಸವ ಮತ್ತು ಸಾಂಸ್ಕ್ರತಿಕ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ವಿವಿಧ ಸಿದ್ಧಾಂತದ ನೆಲೆಯಲ್ಲಿ ಮೂಡಿಬರುವ ಸಾಹಿತ್ಯ ಕೃಷಿಯು ಓದುಗರನ್ನು ವಿಶ್ವಮಾನವ ಪಂಥವನ್ನು ಅನುಸರಿಸುವಂತೆ ಪ್ರೇರೇಪಿಸಬೇಕು. ಆಗ ಮಾತ್ರ ಸಾಹಿತ್ಯ ವಲಯವು ಸಾರ್ಥಕ್ಯ ಪಡೆಯುತ್ತದೆ~ ಎಂದು ಹೇಳಿದರು.
`ಮಣ್ಣಿನ ಸೊಗಡನ್ನು ಚಿಂತನೆಯಲ್ಲಿ ಆಳವಡಿಸಿಕೊಂಡು ಬರೆದಾಗ ಮಾತ್ರ ಸಾಹಿತ್ಯ ಕೃತಿಗಳು ಶ್ರೇಷ್ಠವೆನಿಸುತ್ತದೆ. ಈ ನಿಟ್ಟಿನಲ್ಲಿ ಯುವ ಸಾಹಿತಿಗಳು ಚಿಂತನೆ ನಡೆಸುವ ಅಗತ್ಯವಿದೆ~ ಎಂದರು.
ಸಂಸದ ಎನ್.ಚಲುವರಾಯಸ್ವಾಮಿ ಮಾತನಾಡಿ, `ಪ್ರಸ್ತುತ ದಿನಗಳಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಕೊರತೆಯಿಲ್ಲ. ಅವರನ್ನು ಸೂಕ್ತ ಸಂದರ್ಭದಲ್ಲಿ ಗುರುತಿಸಿ ಸನ್ಮಾನಿಸುವ ಜನರ ಕೊರತೆಯಿದೆ. ಸಾಧಕರಿಗೆ ನಿರಂತರವಾಗಿ ಪ್ರೋತ್ಸಾಹ ನೀಡಬೇಕು~ ಎಂದು ಹೇಳಿದರು.
ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯಿತು. ಸಾಹಿತಿ ಡಾ.ಚಂದ್ರಶೇಖರ ಕಂಬಾರ ದಂಪತಿ ಹಾಗೂ ಸಂಗೀತ ಕಲಾವಿದೆ ಶ್ಯಾಮಲಾ ಜಿ ಭಾವೆ ಅವರಿಗೆ ಸನ್ಮಾನ ಮಾಡಲಾಯಿತು. ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಇ.ಕೃಷ್ಣಪ್ಪ ಇತರರು ಉಪಸ್ಥಿತರಿದ್ದರು.