ನಾಳೆ ಐಪಿಎಲ್ ಆಡಳಿತ ಮಂಡಳಿ ಸಭೆ
ಮುಂಬೈ (ಪಿಟಿಐ): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಡಳಿತ ಮಂಡಳಿ ಹಾಗೂ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉಪ ಸಮಿತಿಗಳ ಸಭೆ ಅಕ್ಟೋಬರ್ 17ರಂದು ನಡೆಯಲಿದ್ದು, ಐಪಿಎಲ್ ತಂಡ ಡೆಕ್ಕನ್ ಚಾರ್ಜರ್ಸ್ ಫ್ರಾಂಚೈಸ್ ರದ್ದು ಮಾಡಿರುವ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ.
`ಬುಧವಾರ ಮುಂಬೈಯಲ್ಲಿ ಸಭೆ ನಡೆಯುವುದು ಖಚಿತ. ಈ ಸಭೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ~ ಎಂದು ಬಿಸಿಸಿಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ರತ್ನಾಕರ ಶೆಟ್ಟಿ ಸೋಮವಾರ ಮಾಧ್ಯಮದವರಿಗೆ ತಿಳಿಸಿದರು.
ಬಿಸಿಸಿಐ ಜಾರ್ಜರ್ಸ್ ತಂಡಕ್ಕೆ ನೂತನ ಫ್ರಾಂಚೈಸ್ ಹುಡುಕಾಡುತ್ತಿದೆ. ಅದಕ್ಕಾಗಿ ಕ್ರಿಕೆಟ್ ಮಂಡಳಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದೆ.
ಕ್ರೀಡಾ ನಿಯಮ ಪಾಲಿಸಲು ಆರ್ಚರಿ ಸಂಸ್ಥೆಗೆ `ಹೈ~ ಆದೇಶ
ನವದೆಹಲಿ (ಪಿಟಿಐ/ಐಎಎನ್ ಎಸ್): `ರಾಷ್ಟ್ರೀಯ ಕ್ರೀಡಾ ನಿಯಮಗಳನ್ನು ಹಾಗೂ ನೀತಿಯನ್ನು ತಪ್ಪದೇ ಪಾಲಿಸಬೇಕು~ ಎಂದು ಭಾರತ ಆರ್ಚರಿ ಸಂಸ್ಥೆಗೆ ದೆಹಲಿ ಹೈಕೋರ್ಟ್ ಸೋಮವಾರ ಆದೇಶ ನೀಡಿದೆ.
`ಅಕ್ಟೋಬರ್ 28ರಂದು ಆರ್ಚರಿ ಸಂಸ್ಥೆಯ ವಿವಿಧ ಪದಾಧಿಕಾರಿಗಳ ಹುದ್ದೆಗೆ ಚುನಾವಣೆ ನಡೆಯಲಿದೆ. ಆದ್ದರಿಂದ ಚುನಾವಣೆಯಲ್ಲಿ ಸ್ಪರ್ಧಿಸಲಿರುವವರು ನಾಮಪತ್ರಗಳನ್ನು ಚುನಾವಣಾ ಅಧಿಕಾರಿಗೆ ಸಲ್ಲಿಸಬೇಕು~ ಎಂದು ನ್ಯಾಯಮೂರ್ತಿ ಡಿ. ಮುರುಗೇಶನ್ ಹಾಗೂ ರಾಜೀವ್ ಅವರನ್ನೊಳಗೊಂಡ ವಿಭಾಗೀಯ ಪೀಠ ಸೋಮವಾರ ತಿಳಿಸಿದೆ.
`ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರವನ್ನು ಚುನಾವಣಾಧಿಕಾರಿಗೆ ಸಲ್ಲಿಸಬೇಕೆ ವಿನಃ ಆರ್ಚರಿ ಸಂಸ್ಥೆಯ ಅಧ್ಯಕ್ಷರಿಗೆ ಅಲ್ಲ~ ಎಂದು ಒತ್ತಿ ಹೇಳಿರುವ ಕೋರ್ಟ್, ಕ್ರೀಡಾ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಸೂಚನೆ ನೀಡಿದೆ.
ಸಿ.ಕೆ.ನಾಯ್ಡು ಟ್ರೋಫಿಗೆ ಗಣೇಶ್ ನಾಯಕ
ಬೆಂಗಳೂರು: ಉದ್ಯಾನನಗರಿಯಲ್ಲಿರುವ ಜೆಐಆರ್ಎಸ್ ಕ್ರೀಡಾಂಗಣದಲ್ಲಿ ಅಕ್ಟೋಬರ್ 19ರಿಂದ 22ರ ವರೆಗೆ ನಡೆಯಲಿರುವ ಸಿ.ಕೆ. ನಾಯ್ಡು ಕ್ರಿಕೆಟ್ ಟ್ರೋಫಿಯ ಪಂದ್ಯಕ್ಕೆ ಕರ್ನಾಟಕ `ಎ~ ತಂಡವನ್ನು ಸೋಮವಾರ ಪ್ರಕಟಿಸಲಾಗಿದ್ದು, ಗಣೇಶ್ ಸತೀಶ್ ಮುನ್ನಡೆಸಲಿದ್ದಾರೆ.
ತಂಡ ಇಂತಿದೆ: ಗಣೇಶ್ ಸತೀಶ್ (ನಾಯಕ), ಕೆ.ಬಿ. ಪವನ್, ಸುನಿಲ್ ಎನ್. ರಾಜು, ರಾಹುಲ್ ಕೆ.ಎಲ್., ಕುನಾಲ್ ಕಪೂರ್, ಸಮರ್ಥ ಆರ್., ಪವನ್ ದೇಶಪಾಂಡೆ, ಸಾಧಿಕ್ ಕೀರ್ಮಾನಿ (ವಿಕೆಟ್ ಕೀಪರ್), ರೋನಿತ್ ಮೊರೆ, ಪರಪ್ಪ ಮಾರ್ಡಿ, ಶರತ್ ಎಚ್.ಎಸ್., ಅರ್ಜುನ್ ಶೆಟ್ಟಿ, ಅಬ್ರಾರ್ ಖಾಜಿ ಹಾಗೂ ಮಯಾಂಕ್ ಎ. ಅಗರ್ವಾಲ್. ಜಿ.ಕೆ. ಅನಿಲ್ ಕುಮಾರ್ ಹಾಗೂ ಟಿ. ನಾಸೀರುದ್ದೀನ್ (ಕೋಚ್). ಆನಂದ್ ಪಿ. ಕಟ್ಟಿ (ಮ್ಯಾನೇಜರ್), ವಿನೋದ್ ಕುಮಾರ್ ಜೈನ್ (ಫಿಸಿಯೊ).
ವಿನೂ ಮಂಕಡ್ ಟ್ರೋಫಿ: ಗೋಪಾಲ್ ಸಾರಥ್ಯ
ಬೆಂಗಳೂರು: ಶ್ರೇಯಸ್ ಗೋಪಾಲ್ ಅಕ್ಟೋಬರ್ 20ರಿಂದ 26ರ ವರೆಗೆ ಇಲ್ಲಿ ನಡೆಯಲಿರುವ 19 ವರ್ಷದೊಳಗಿನವರ ವಿನೂ ಮಂಕಡ್ ಕ್ರಿಕೆಟ್ ಟ್ರೋಫಿಗೆ (ದಕ್ಷಿಣ ವಲಯ) ಕರ್ನಾಟಕ ತಂಡ ಮುನ್ನಡೆಸಲಿದ್ದಾರೆ.
ತಂಡ: ಶ್ರೇಯಸ್ ಗೋಪಾಲ್ (ನಾಯಕ), ಸುಚಿತ್ ಜೆ (ಉಪ ನಾಯಕ), ನಿಶ್ಚಲ್ ಡಿ., ರೋಹನ್ ಕದಮ್, ಅಭಿಷೇಕ್ ರೆಡ್ಡಿ, ಕ್ರಾಂತಿ ಕುಮಾರ್, ಭರತ್ ಕೆ.ಎನ್., ನವೀನ್ ಎಂ.ಜಿ., ಪ್ರತೀಕ್ ಜೈನ್, ವಿಷ್ಣು ಪ್ರಸಾದ್ ಎಂ., ಕರಿಯಪ್ಪ, ರೌನಿಕ್ ಶಹಾ, ಅನುರಾಗ್ (ವಿಕೆಟ್ ಕೀಪರ್), ಪ್ರದೀಪ್ ಮತ್ತು ನಿರ್ಮಲ್ ಸೆಲ್ವರಾಜನ್. ವಿಜಯ್ ಮಧ್ಯಾಲ್ಕರ್ ಹಾಗೂ ಆರ್. ಮುರಳೀಧರ್ (ಕೋಚ್).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.