ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ಷಿಪ್ತ ರಾಷ್ಟ್ರೀಯ ಸುದ್ದಿಗಳು

Last Updated 18 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಗಣೇಶನ ಲಡ್ಡು ರೂ 9.26ಲಕ್ಷಕ್ಕೆ ಹರಾಜು!
ಹೈದರಾಬಾದ್‍: ಇ
ಲ್ಲಿನ ಪ್ರಸಿದ್ಧ ಬಲಾಪುರ ಗಣೇಶೋತ್ಸವದಲ್ಲಿ ಇಡಲಾಗಿದ್ದ ಲಡ್ಡು ರೂ. 9.26 ಲಕ್ಷಕ್ಕೆ ಹರಾಜಾಗಿ ದಾಖಲೆ ನಿರ್ಮಿಸಿದೆ. ಕಳೆದ ವರ್ಷಕ್ಕಿಂತ ರೂ. 2 ಲಕ್ಷ ಹೆಚ್ಚು ಮೊತ್ತಕ್ಕೆ ಈ ಬಾರಿ ಲಡ್ಡು ಹರಾಜಾಗಿದೆ ಎಂದು ಬಲಾಪುರ ಗಣೇಶೋತ್ಸವ ಸಮಿತಿ ತಿಳಿಸಿದೆ.

ಬುಧವಾರ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಸಂದರ್ಭದಲ್ಲಿ ಹರಾಜು ಪ್ರಕ್ರಿಯೆ ನಡೆದದ್ದು ಮಾಜಿ ಮೇಯರ್‍ ತೀಗಳ ಕೃಷ್ಣರೆಡ್‍ಡಿ ಹರಾಜಿನಲ್ಲಿ ಲಡ್ಡು ಪಡೆದಿದ್ದಾರೆ. ಕಳೆದ ವರ್ಷ ರೂ. 7.50ಲಕ್ಷಕ್ಕೆ ಲಡ್ಡು ಹರಾಜಾಗಿತ್ತು. 

1994ರಿಂದ  ಗಣೇಶನಿಗೆ ನೈವೇದ್ಯ ರೂಪದಲ್ಲಿಟ್ಟಿರುವ ಲಡ್ಡನ್ನು ಹರಾಜಿಗೆ ಇಡಲಾಗುತ್ತಿದ್ದು, ಪ್ರಥಮ ವರ್ಷ ರೂ. 450ಕ್ಕೆ ಲಡ್ಡು ಹರಾಜಾಗಿತ್ತು. ಹರಾಜಿನಲ್ಲಿ ಗಳಿಸಿದ ಹಣವನ್ನು ಪಂಚಾ­ಯ್ತಿಯ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತದೆ ಎಂದು ಬಲಾಪುರದ ನಿವಾಸಿಗಳು ತಿಳಿಸುತ್ತಾರೆ.

ಆಂಧ್ರಪ್ರದೇಶ ಡಿಜಿಪಿ ವಿರುದ್ಧ ಸಿಬಿಐ ತನಿಖೆ ಆರಂಭ
ನವದೆಹಲಿ (ಪಿಟಿಐ):
ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ ಆಂಧ್ರಪ್ರದೇಶದ ಪೊಲೀಸ್‌ ಮುಖ್ಯಸ್ಥ ವಿ.ದಿನೇಶ್‌ ರೆಡ್ಡಿ ಅವರ ವಿರುದ್ಧದ ಆದಾಯ ಮೀರಿದ ಆಸ್ತಿ ಆರೋಪದ ಕುರಿತು ಸಿಬಿಐ ತನಿಖೆ ಆರಂಭಿಸಿದೆ.

1977ರ ಐಪಿಎಸ್‌ ತಂಡದ ಆಂಧ್ರ ಪ್ರದೇಶಕ್ಕೆ ನಿಯೋಜಿತ  ದಿನೇಶ್‌ ರೆಡ್ಡಿ ವಿರುದ್ಧ ಸಿಬಿಐ ಆದಾಯ ಮೀರಿದ ಆಸ್ತಿ ಇರುವ ಕುರಿತು ದೂರು ದಾಖಲಿಸಿಕೊಂ ಡಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ರೆಡ್ಡಿ ಅವರ ವಿರುದ್ಧ ಬಂದಿರುವ ಆರೋಪಗಳ ಕುರಿತು ತನಿಖೆ ನಡೆಸಿದ ನ್ಯಾಯಪೀಠವು ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿದೆ.ರೆಡ್ಡಿ ಅವರ ವಿರುದ್ಧ ಐಪಿಎಸ್‌ ಅಧಿಕಾರಿ ಉಮೇಶ್‌ ಕುಮಾರ್‌ ದೂರು ಸಲ್ಲಿಸಿದ್ದರು.  ಡಿಜಿಪಿ ರೆಡ್ಡಿ, ಸಂಸದ ಎಂ.ಎ. ­ಖಾನ್‌ ಅವರ ಖೊಟ್ಟಿ ಸಹಿ ಮಾಡಿ ದಾಖಲೆ ಸಿದ್ಧಪಡಿಸಿದ್ದರು ಎಂದು ಆರೋಪಿಸಿದ್ದಾರೆ.

ಇದಕ್ಕೆ ನ್ಯಾಯಪೀಠ ಉತ್ತರಿಸಿ ‘ಖೊಟ್ಟಿ ಸಹಿಯಾಗಿದೆಯೇ ಅಥವಾ ಆ ರೀತಿ ಸೃಷ್ಟಿಸಲಾಗಿದೆಯೇ’ ಎನ್ನುವುದನ್ನು ತಿಳಿಯಲು ತನಿಖೆ ಅವಶ್ಯಕವಾಗಿದೆ ಎಂದು ಹೇಳಿದೆ. ಅಲ್ಲದೇ, ನೀಡ­ಲಾಗಿರುವ ದೂರು ನಕಲಿಯಾಗಿದ್ದು, ಕ್ರಯ ಪತ್ರ ಕೆಲ ವ್ಯಕ್ತಿಗಳಿಂದ ಅಕ್ರಮವಾಗಿ ಪಡೆದುಕೊಳ್ಳಲಾಗಿದೆ. ಇದನ್ನು ತಿರುಚಲಾಗಿರುವುದು ಕಂಡು ಬಂದಿಲ್ಲ ಎಂದು ಹೇಳಿದೆ.

ಅತ್ಯಾಚಾರಿಗಳಿಗೆ ಮರಣದಂಡನೆ: ಹೈಕೋರ್ಟ್‌ಗೆ ಕಡತ
ನವದೆಹಲಿ (ಪಿಟಿಐ):
ರಾಜಧಾನಿಯಲ್ಲಿ ಡಿ.16ರಂದು ಬಸ್‌ನಲ್ಲಿ ಯುವತಿಯ ಮೇಲೆ ಅಮಾನುಷ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ನಾಲ್ವರಿಗೆ ಮರಣದಂಡನೆ ವಿಧಿಸಿದ ತ್ವರಿತ ನ್ವಾಯಲಯ ಸಂಬಂಧಿಸಿದ ಕಡತವನ್ನು ದೆಹಲಿ ಹೈಕೋರ್ಟ್‌ಗೆ ಕಳುಹಿಸಿದೆ.

ಯಾವುದೇ ವಿಚಾರಣಾ ನ್ಯಾಯಾಲಯ ಮರಣದಂಡನೆ ತೀರ್ಪು ಪ್ರಕಟಿಸಿದರೆ ಅದನ್ನು ಹೈಕೋರ್ಟ್‌ ದೃಢಪಡಿಸಬೇಕು. ಇದಕ್ಕಾಗಿ ವಿಚಾರಣಾ ನ್ಯಾಯಾ­ಲಯವು ಸಂಬಂಧಿಸಿದ ಕಡತವನ್ನು ತೀರ್ಪು ಪ್ರಕಟಿಸಿದ 30 ದಿವಸಗಳೊಳಗೆ ಹೈಕೋರ್ಟ್‌ಗೆ ಕಳುಹಿಸಬೇಕಾದ್ದು ಕಡ್ಡಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT