ಜೂನ್ನಲ್ಲಿ ಹೊಸ ಸಂಸತ್
ವಾಷಿಂಗ್ಟನ್ (ಪಿಟಿಐ): ಮುಂದಿನ ವರ್ಷದ ಜೂನ್ ೧ರೊಳಗೆ ಭಾರತದಲ್ಲಿ ಚುನಾವಣೆ ಪೂರ್ಣಗೊಂಡು ಹೊಸ ಸಂಸತ್ ರಚನೆಯಾಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ವಿ. ಎಸ್. ಸಂಪತ್ ಹೇಳಿದ್ದಾರೆ.
‘ಚುನಾವಣಾ ಆಯೋಗ ಈಗಾಗಲೇ 2014ರ ಸಾರ್ವತ್ರಿಕ ಚುನಾವಣೆಗೆ ಸಿದ್ಧತೆಯನ್ನು ಆರಂಭಿಸಿದೆ. ಐದು, ಆರು ಅಥವಾ ಏಳು ಹಂತಗಳಲ್ಲಿ ಚುನಾವಣೆ ನಡೆಯಬಹುದು’ ಎಂದು ಭಾರತೀಯ ಕೈಗಾರಿಕಾ ಒಕ್ಕೂಟ, ಅಮೆರಿಕ ಭಾರತ ಬಿಸಿನೆಸ್ ಕೌನ್ಸಿಲ್ ಸಹಯೋಗದಲ್ಲಿ ಇಲ್ಲಿನ ಬ್ರೂಕಿಂಗ್ ಇನ್ಸ್ಟಿಟ್ಯೂಟ್ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಅವರು ತಿಳಿಸಿದ್ದಾರೆ.
ಮಾರ್ಚ್ ತಿಂಗಳ ಮಧ್ಯದಲ್ಲಿ ಚುನಾವಣೆ ನಡೆಯುವ ಸೂಚನೆ ನೀಡಿದ ಸಂಪತ್, ವೇಳಾಪಟ್ಟಿಯ ಬಗ್ಗೆ ಯಾವುದೇ ವಿವರ ನೀಡಲಿಲ್ಲ.
ಮುಲ್ಲಾಗೆ ಗಲ್ಲು: ಪಾಕ್ನಲ್ಲಿ ಪ್ರತಿಭಟನೆ
ಇಸ್ಲಾಮಾಬಾದ್ (ಐಎಎನ್ಎಸ್): ಬಾಂಗ್ಲಾದೇಶವು ಜಮಾತೆ ಇಸ್ಲಾಮಿ ಪಕ್ಷದ ಮುಖಂಡ ಅಬ್ದುಲ್ ಖಾದರ್ ಮುಲ್ಲಾನನ್ನು ನೇಣುಗೇರಿಸಿದ್ದಕ್ಕೆ ಸಿಟ್ಟಿಗೆದ್ದ ಪಾಕಿಸ್ತಾನದ ಜಮಾತೆ ಇಸ್ಲಾಮಿ ಪಕ್ಷದ ಕಾರ್ಯಕರ್ತರು ಸಿಂಧ್ ಪ್ರಾಂತ್ಯದ ಹಲವೆಡೆ ತೀವ್ರವಾಗಿ ಪ್ರತಿಭಟನೆ ನಡೆಸಿದ್ದಾರೆ.
‘ಬಾಂಗ್ಲಾದೇಶದಲ್ಲಿ ಮುಲ್ಲಾನನ್ನು ಗಲ್ಲಿಗೇರಿಸುವಾಗ ಪಾಕ್ ಸರ್ಕಾರ ಭಾರತದ ಜೊತೆ ಈರುಳ್ಳಿ, ಟೊಮೊಟೋ ವ್ಯಾಪಾರದಲ್ಲಿ ತೊಡಗಿತ್ತು’ ಎಂದು ಜಮಾತ್ ಉದ್–ದವಾ ಸಂಘಟನೆಯ ನಾಯಕ ವ್ಯಂಗ್ಯವಾಡಿದ್ದಾರೆ.
ಜಮಾತೆ ಇಸ್ಲಾಮಿಯ ಮುಖಂಡರು ಬಾಂಗ್ಲಾದೇಶದೊಂದಿಗಿನ ಒಪ್ಪಂದಗಳನ್ನು ಮುರಿದುಕೊಳ್ಳುವಂತೆ ಹಾಗೂ ಅವರ ರಾಯಭಾರಿಯನ್ನು ವಾಪಸ್ ಕಳುಹಿಸುವಂತೆ ಪಾಕ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಸತ್ತವರ ಸಂಖ್ಯೆ 10 ಕ್ಕೆ (ಢಾಕಾ ವರದಿ): ಅಬ್ದುಲ್ ಖಾದರ್ ಮುಲ್ಲಾನನ್ನು ಗಲ್ಲಿಗೇರಿಸಿದ್ದನ್ನು ವಿರೋಧಿಸಿ ಬಾಂಗ್ಲಾದಲ್ಲಿ ಭುಗಿಲೆದ್ದ ಹಿಂಸಾಚಾರದಿಂದ ಸತ್ತವರ ಸಂಖ್ಯೆ 10 ಕ್ಕೆ ಏರಿದೆ.
ಬಾಹ್ಯಾಕಾಶಕ್ಕೆ ಕೋತಿ ಕಳುಹಿಸಿದ ಇರಾನ್
ಟೆಹರಾನ್ (ಎಪಿಎಫ್): ಬಾಹ್ಯಾಕಾಶಕ್ಕೆ ಕೋತಿಯನ್ನು ಕಳುಹಿಸಿ ಜೀವಂತವಾಗಿ ಮರಳಿ ಕರೆಯಿಸುವಲ್ಲಿ ಯಶಸ್ವಿಯಾಗಿರುವುದಾಗಿ ಇರಾನ್ ಹೇಳಿಕೊಂಡಿದೆ.
ಈ ಪ್ರಯತ್ನದಲ್ಲಿ ಭಾಗವಹಿಸಿದ ಎಲ್ಲ ವಿಜ್ಞಾನಿಗಳನ್ನು ಅಧ್ಯಕ್ಷ ಹಸನ್ ರೊಹಾನಿ ಅಭಿನಂದಿಸಿದ್ದಾರೆ.
2020ರ ವೇಳೆಗೆ ಮಾನವ ಸಹಿತ ರಾಕೆಟ್ ಉಡಾವಣೆಗೆ ಇರಾನ್ ಚಿಂತನೆ ನಡೆಸಿದೆ. ಇರಾನ್ನ ಈ ಪ್ರಯತ್ನವನ್ನು ಪಾಶ್ಚಾತ್ಯ ರಾಷ್ಟ್ರಗಳು ‘ಪರಮಾಣು ಸಿಡಿತಲೆ ಉಡಾವಣೆಯ ಪೂರ್ವತಯಾರಿ’ ಎಂದು ಬಣ್ಣಿಸಿವೆ.
ಇರಾನ್ಗೆ ತಂತ್ರಜ್ಞಾನ ರಫ್ತು ಮಾಡುವುದರ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿ 2007ರಲ್ಲೇ ನಿರ್ಬಂಧ ಹೇರಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.