ಮಾನವ ರಹಿತ ವಿಮಾನ ಅಪಘಾತ
ನವದೆಹಲಿ (ಪಿಟಿಐ): ನೌಕಾಪಡೆಗೆ ಸೇರಿದ ಮಾನವ ರಹಿತ ವಿಮಾನ (ಯುಎವಿ) ವಿಶಾಖಪಟ್ಟಣಂ ಸಮೀಪ ಗುರುವಾರ ಅಪಘಾತಕ್ಕೆ ಈಡಾಗಿದೆ.
`ಸರ್ಚರ್ ಎಂ.ಕೆ-2 ಯುಎವಿ~ ಹೆಸರಿನ ಈ ವಿಮಾನವು ಅಭ್ಯಾಸ ಮುಗಿಸಿ ನೆಲೆಗೆ ಹಿಂತಿರುಗುತ್ತಿದ್ದ ವೇಳೆ ಬೆಟ್ಟ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕಣ್ಗಾವಲು, ಆಯಕಟ್ಟಿನ ನೆಲೆಗಳ ಪತ್ತೆ, ಹಾನಿ ಅಂದಾಜು, ಕಾರ್ಯಾಚರಣೆ ಸೇರಿದಂತೆ ಹಲವು ಕಾರ್ಯಕ್ಕೆ ಇದನ್ನು ಬಳಸಿಕೊಳ್ಳಲಾಗುತ್ತಿತ್ತು.
`ಘಟನೆಯಲ್ಲಿ ಯಾವುದೇ ಜೀವ ಅಥವಾ ಆಸ್ತಿ ಹಾನಿಯಾಗಿಲ್ಲ. ತನಿಖೆಗೆ ಆದೇಶಿಸಲಾಗಿದೆ~ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಂಧ್ರ ಸರ್ಕಾರಿ ವೆಬ್ಸೈಟ್ಗಳ ಮೇಲೆ ದಾಳಿ
ಹೈದರಾಬಾದ್: ಆಂಧ್ರ ಪ್ರದೇಶದ ಬಜೆಟ್ ಮಂಡನೆಗೆ ಕೇವಲ ಒಂದು ದಿನ ಬಾಕಿ ಇರುವಾಗ ದುಷ್ಕರ್ಮಿಗಳು ಸರ್ಕಾರದ 21 ವೆಬ್ಸೈಟ್ಗಳ ಮೇಲೆ ದಾಳಿ ನಡೆಸಿ ಹಾಳುಗೆಡವಿರುವ ಘಟನೆ ನಡೆದಿದೆ.
ಈ ದಾಳಿಯು ಅಧಿಕಾರಿ ವಲಯದಲ್ಲಿ ಆತಂಕ ಮೂಡಿಸಿದೆ. ಆದರೆ, ಘಟನೆಯಿಂದ ಬಜೆಟ್ಗೆ ಸಂಬಂಧಿಸಿದ ಮಾಹಿತಿ ಸೋರಿಕೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಎನ್ಆರ್ಎಚ್ಎಂ: ಮತ್ತೊಬ್ಬನ ನಿಗೂಢ ಸಾವು
ಲಖೀಮ್ಪುರ ಖೇರಿ (ನವದೆಹಲಿ) (ಪಿಟಿಐ): ಉತ್ತರ ಪ್ರದೇಶದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಹಗರಣಕ್ಕೆ (ಎನ್ಆರ್ಎಚ್ಎಂ) ಸಂಬಂಧಿಸಿದಂತೆ ಆರೋಗ್ಯ ಇಲಾಖೆಯ ನೌಕರರೊಬ್ಬರು ನಿಗೂಢವಾಗಿ ಸಾವಿಗೀಡಾಗಿದ್ದಾರೆ.
ಇದರಿಂದ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದಲ್ಲಿ ಐವರು ವ್ಯಕ್ತಿಗಳು ಶಂಕಾಸ್ಪದವಾಗಿ ಸಾವಿಗೀಡಾದಂತಾಗಿದೆ. ಇತ್ತೀಚೆಗೆ ನಾಪತ್ತೆಯಾಗಿದ್ದ ಆರೋಗ್ಯ ಇಲಾಖೆಯ ಲೆಕ್ಕಾಧಿಕಾರಿ ಮಹೇಂದ್ರ ಶರ್ಮ ಅವರ ಮೃತದೇಹ ಗಂಭೀರ ಗಾಯಗಳೊಂದಿಗೆ ಆರೋಗ್ಯ ಕೇಂದ್ರವೊಂದರ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ.