ಮಾವೋ ಉಗ್ರರಿಗೆ ಅಂತಿಮ ಗಡುವು
ಝಾರ್ಗ್ರಾಮ, (ಪಿಟಿಐ): ಏಳು ದಿನಗಳ ಒಳಗಾಗಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾವೋವಾದಿಗಳಿಗೆ ಶನಿವಾರ ಅಂತಿಮ ಗಡುವು ನೀಡಿದ್ದಾರೆ. ಯಾವುದೇ ಕಾರಣಕ್ಕೂ ಹಿಂಸಾಚಾರ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಹತ್ಯೆ ಮತ್ತು ಸಂಧಾನ ಎರಡೂ ಒಟೊಟ್ಟಿಗೆ ಸಾಗಲು ಸಾಧ್ಯವಿಲ್ಲ. ಆದ್ದರಿಂದ ಗಡುವು ನೀಡುತ್ತಿದ್ದೇನೆ ಎಂದು ಮಮತಾ ಸ್ಪಷ್ಟಪಡಿಸಿದ್ದಾರೆ.
ನ. 9ರಿಂದ ಸಂಪತ್ತು ದಾಖಲೀಕರಣ
ತಿರುವನಂತಪುರ, (ಐಎಎನ್ಎಸ್): ಪ್ರಖ್ಯಾತ ಪದ್ಮನಾಭ ಸ್ವಾಮಿ ದೇವಸ್ಥಾನದ ನೆಲಮಾಳಿಗೆಯಲ್ಲಿ ಪತ್ತೆಯಾಗಿರುವ ಒಂದು ಲಕ್ಷ ಕೋಟಿ ರೂಪಾಯಿ ಮೌಲ್ಯದ ವಜ್ರ ವೈಢೂರ್ಯಗಳ ದಾಖಲೀಕರಣ ಕಾರ್ಯ ನವೆಂಬರ್ 9ರಿಂದ ಆರಂಭವಾಗಲಿದೆ.
ದಾಖಲೀಕರಣ ಆರಂಭಿಸುವ ಮೊದಲು ಕೋರ್ಟ್ ಸೂಚಿಸಿರುವ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಸುಪ್ರೀಂಕೋರ್ಟ್ ನೇಮಿಸಿರುವ ಐವರು ಸದಸ್ಯರ ಸಮಿತಿಯ ಮುಖ್ಯಸ್ಥ ಹಾಗೂ ರಾಷ್ಟ್ರೀಯ ಸಂಗ್ರಹಾಲಯದ ಮಹಾ ನಿರ್ದೇಶಕ ಸಿ. ವಿ. ಆನಂದ ಬೋಸ್ ಅವರು ತಿಳಿಸಿದ್ದಾರೆ.
ಸ್ಫೋಟಕ ವಶ ಪ್ರಕರಣ: ತನಿಖೆಗೆ ತಂಡ
ಶ್ರೀನಗರ/ ಜಮ್ಮು, (ಐಎಎನ್ಎಸ್): ಕಾರಿನಲ್ಲಿ ಸ್ಫೋಟಕಗಳು ಪತ್ತೆಯಾದ ನಂತರ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಅಂಬಾಲಾಕ್ಕೆ ಒಂದು ಪೊಲೀಸ್ ತಂಡವನ್ನು ಕಳುಹಿಸಿ ತನಿಖೆಗೆ ನೆರವಾಗುತ್ತಿದ್ದಾರೆ ಎಂದು ಹರಿಯಾಣ ಪೊಲೀಸ್ ಮೂಲಗಳು ತಿಳಿಸಿವೆ.
ಹರಿಯಾಣ ಮತ್ತು ದೆಹಲಿ ಪೊಲೀಸರು ವಶಪಡಿಸಿಕೊಂಡಿರುವ ಆರ್ಡಿಎಕ್ಸ್ ಪರಿಶೀಲನೆ ಮಾಡಲು ತಂಡವೊಂದನ್ನು ಕಳುಹಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ಕುಲದೀಪ್ ಖೋಡಾ ತಿಳಿಸಿದ್ದಾರೆ.
ಹಂಚಿಕೆ ಅಕ್ರಮ: ತನಿಖೆಗೆ ಆಗ್ರಹ
ಪಣಜಿ, (ಐಎಎನ್ಎಸ್): ರಾಜ್ಯ ಸರ್ಕಾರದ ಒಡೆತನದ ಕೈಗಾರಿಕಾ ಅಭಿವೃದ್ಧಿ ನಿಗಮವು ರಾಜಕಾರಣಿಗಳ ಜತೆ ಶಾಮೀಲಾಗಿ ನಡೆಸಿರುವ ಕೈಗಾರಿಕಾ ನಿವೇಶನ ಹಂಚಿಕೆಯ ಹಗರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಗೋವಾ ಸಣ್ಣ ಕೈಗಾರಿಕೆಗಳ ಸಂಘವು ಶನಿವಾರ ಒತ್ತಾಯಿಸಿದೆ.
ಉತ್ತರಾಖಂಡ ರಾಜ್ಯಪಾಲರಾದ ಮಾರ್ಗರೆಟ್ ಆಳ್ವ ಅವರ ಪುತ್ರನ ಒಡೆತನದ ಮಿಡಿಟೆಕ್ ಪ್ರೈವೆಟ್ ಲಿಮಿಟೆಡ್ ಕಂಪೆನಿಗೆ ಮಂಜೂರು ಮಾಡಿರುವ ಕೈಗಾರಿಕಾ ನಿವೇಶನವು ಹಗರಣದ ಕೇಂದ್ರಬಿಂದು ಎಂದು ಸಂಘವು ತಿಳಿಸಿದೆ.
ಕೂಡುಂಕುಳಂ: ಅಡ್ಡಿಬೇಡ
ಚೆನ್ನೈ, (ಪಿಟಿಐ): ವಿಜ್ಞಾನಿಗಳು ಮತ್ತು ನೌಕರರಿಗೆ ಕೂಡುಂಕುಳಂ ಪರಮಾಣು ಸ್ಥಾವರ ವಿರೋಧಿ ಚಳವಳಿಗಾರರು ಕೆಲಸಕ್ಕೆ ಹೋಗಲು ಅಡ್ಡಿಪಡಿಸುತ್ತಿರುವುದು ದುರದೃಷ್ಟಕರ ಸಂಗತಿ ಎಂದು ಕೇಂದ್ರ ಸರ್ಕಾರ ಶನಿವಾರ ತಿಳಿಸಿದೆ.
ಚಳವಳಿಗಾರರು ಮಾತುಕತೆಗೆ ಬರಬೇಕು. ನಾವು ಅವರಲ್ಲಿರುವ ಆತಂಕವನ್ನು ದೂರ ಮಾಡಲು ಸಿದ್ಧರಿದ್ದೇವೆ ಎಂದು ತಿಳಿಸಿರುವ ಪ್ರಧಾನಿ ಕಾರ್ಯಾಲಯದ ರಾಜ್ಯ ಸಚಿವ ವಿ. ನಾರಾಯಣ ಸ್ವಾಮಿ, ಪರಮಾಣು ಸ್ಥಾವರದ ಉದ್ಯೋಗಿಗಳಿಗೆ ಕೆಲಸ ಮಾಡಲು ಅಡ್ಡಿಪಡಿಸುತ್ತಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.