ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ಕ್ಷೇತ್ರದ ಜಾತಿ ಪ್ರಶ್ನೆ

Last Updated 17 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಜಾತಿ, ಧರ್ಮ, ಲಿಂಗ ಇತ್ಯಾದಿ ಸಂಗೀತದ ಮೇಲೆ ಪರಿಣಾಮ ಬೀರುವುದೇ ಎಂದರೆ ಹೌದು ಎಂದೇ ಹೇಳಬೇಕಾಗುತ್ತದೆ. ಕೆಲವೊಮ್ಮೆ ಪ್ರತ್ಯಕ್ಷವೂ ಮಗದೊಮ್ಮೆ ಪರೋಕ್ಷವೂ ಆದ ಸಂಬಂಧವನ್ನು ಈ ಅಂಶಗಳು ಸಂಗೀತ ಕ್ಷೇತ್ರದೊಂದಿಗೆ ಹೊಂದಿವೆ. ಯಾವುದೇ ಕಲಾಪ್ರಕಾರವೇ ಆಗಲಿ, ಅದು ತಾನು ನೆಲೆಗೊಂಡ ಪರಿಸರದ ಸಮಾಜೋ-ರಾಜಕೀಯ ಪ್ರಕ್ರಿಯೆಗಳಿಗೆ ಹೊರತಾಗಿರುವುದಿಲ್ಲ. ನಮ್ಮ ಸಮಕಾಲೀನ ಕಲಾಪ್ರಕಾರಗಳು ಹತ್ತೊಂಬತ್ತು ಮತ್ತು ಇಪ್ಪತ್ತನೇ ಶತಮಾನದ ವಸಾಹತುಶಾಹಿ ಮತ್ತು ರಾಷ್ಟ್ರೀಯತೆಯ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿವೆ. ಇಪ್ಪತ್ತನೇ ಶತಮಾನದ ರಾಷ್ಟ್ರೀಯತೆಯ ಪ್ರಕ್ರಿಯೆಯು ನಮ್ಮ ಹಲವಾರು ಕಲಾಪ್ರಕಾರಗಳನ್ನು ಸಾಂಸ್ಥೀಕರಣ (institutionalisation) ಗೊಳಿಸಿದವು. ಹೀಗೆ  ಹಿಂದುಸ್ತಾನಿ ಸಂಗೀತ ,  ಕರ್ನಾಟಕ ಸಂಗೀತಗಳು  ಭಾರತೀಯ  ಕಲಾಪ್ರಕಾರಗಳಾಗಿ ಹೊರಹೊಮ್ಮಿ ಆಲ್ ಇಂಡಿಯಾ ರೇಡಿಯೋ ಇತ್ಯಾದಿ ರಾಷ್ಟ್ರೀಯ ಸಂಸ್ಥೆಗಳ ಆಶ್ರಯವನ್ನು ಪಡೆದವು. ರಾಜಾಶ್ರಯದಲ್ಲಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಸಂಗೀತಗಾರರು ಸಂಗೀತವನ್ನು  ಆಧುನಿಕ ಉದ್ಯೋಗವಾಗಿ ಪರಿಗಣಿಸತೊಡಗಿದರು. ರಾಷ್ಟ್ರೀಯತೆಯ ಪ್ರಕ್ರಿಯೆಯಲ್ಲಿ ಮುಂಚೂಣಿಯಲ್ಲಿದ್ದ ಮತ್ತು ಸಾಂಸ್ಕೃತಿಕ ಬಂಡವಾಳ (cultural capita) ಹೊಂದಿದ್ದ ಉಚ್ಚ ಜಾತಿಗಳು ಈ ಪ್ರಕ್ರಿಯೆಯ ಲಾಭ ಪಡೆದುಕೊಂಡವು.

ಹಿಂದೂ ರಾಷ್ಟ್ರೀಯತೆಯ ಸಂದರ್ಭದಲ್ಲಿ ಸಂಗೀತ ಮಾತ್ರವಲ್ಲದೆ ಇತರ ಶಾಸ್ತ್ರಗಳನ್ನೂ ವಿಶಿಷ್ಟ ರೀತಿಯಲ್ಲಿ ಅಧ್ಯಯನ ಮಾಡಿ ಸಂಸ್ಕೃತ ಗ್ರಂಥಗಳಿಗೂ ಉತ್ತರ ಭಾರತದ ಸಂಗೀತಕ್ಕೂ ಸಂಬಂಧ ಸ್ಥಾಪಿಸಿದವರಾದ ವಿ.ಎನ್. ಭಟ್ಕಂಡೆ, ವಿಷ್ಣು ದಿಗಂಬರ ಪಲುಸ್ಕರ್, ಎಸ್.ಎನ್.  ರತಂಜನ್‌ಕರ್ ಅಂಥವರು ಹಿಂದುಸ್ತಾನೀ ಸಂಗೀತ ಕ್ಷೇತ್ರದಲ್ಲಿ ಕಾಣಿಸಿಕೊಂಡರು.  ಪರಿಣಾಮವಾಗಿ ಉತ್ತರ ಭಾರತದಲ್ಲಿ ಸಂಗೀತವೆಂಬುದು ಇಸ್ಲಾಮಿನ ಕೈಯಲ್ಲಿ ಬಿದ್ದು ನರಳಿದ ಒಂದು ಅಪ್ಪಟ ಭಾರತೀಯ ಕಲಾಪ್ರಕಾರವೆಂಬ ಮನೋಭಾವ ಬೆಳೆದುಬಂತು. ಈಗಲೂ ಸಂಗೀತದ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಾಗ ಇಡೀ ಭಾರತದಲ್ಲಿ ಮುಂಚೆ ಒಂದೇ ರೀತಿಯ ಸಂಗೀತವಿತ್ತೆಂದೂ, ಇಸ್ಲಾಮಿಕ್ ದಾಳಿಯಿಂದಾಗಿ ಅದು ಉತ್ತರಾದಿ ಸಂಗೀತವಾಯಿತೆಂದೂ ಹಾಗೂ ದಕ್ಷಿಣದ ಕರ್ನಾಟಕ ಸಂಗೀತವೆಂಬುದು ಒಂದು ರೀತಿಯಲ್ಲಿ  ಪರಿಶುದ್ಧವಾದ ಭಾರತೀಯ ಸಂಗೀತವಾಗಿಯೇ ಉಳಿದಿದೆಯೆಂದೂ ಕಲಿಯುತ್ತಾರೆ.

ಈ ಅಭಿಪ್ರಾಯದ ಪ್ರಕಾರ ಭಾರತೀಯ ಸಂಗೀತವೆಂಬುದು ಆಧ್ಯಾತ್ಮಿಕ ಸಂಗೀತವಾಗಿದ್ದುದು ಐಹಿಕ ಸಂಗೀತವಾಗಿ ಮಾರ್ಪಟ್ಟಿತೆಂದೂ, ಮುಸ್ಲಿಮ್ (ಹಾಗೂ ಹಿಂದೂ) ನಾಟ್ಯಗಾತಿಯರ ಹಾಗೂ ವೇಶ್ಯೆಯರ ಪಾಲಾಯಿತೆಂದೂ ಭಾವಿಸಲಾಯಿತು. ರಾಷ್ಟ್ರೀಯತೆಯು  ಶಾಸ್ತ್ರೀಯ  ಅಧ್ಯಯನದ ಮೂಲಕ ಈ ಗಾಯನ ವಿಧಾನಗಳನ್ನು  ಶುದ್ಧೀಕರಣಗೊಳಿಸುವ ಕೆಲಸವನ್ನು ಮಾಡಿತು. ದಕ್ಷಿಣದಲ್ಲಿ ಕರ್ನಾಟಕ ಸಂಗೀತದ ಕೆಲವು ದಿಗ್ಗಜರು ವೇಶ್ಯಾಜಾತಿಗಳಿಂದ ರಹಸ್ಯ ಗುರುಗಳನ್ನು ಪಡೆದಿರುತ್ತಿದ್ದರು. ತಮ್ಮ ಗುರುಗಳ ಹೆಸರು ಬಹಿರಂಗಗೊಂಡರೆ ತಮಗೆ ಅಪವಾದ ಬರಬಹುದು ಎಂಬ ಭಯ ಈ ದಿಗ್ಗಜಗಳಿಗಿತ್ತು.

ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಜನಮನ್ನಣೆ ಗಳಿಸಿದ ಕೆಲವೇ ಜನ ಮುಸ್ಲಿಮ್ ಸಂಗೀತಗಾರರಲ್ಲಿ ಬಿಸ್ಮಿಲ್ಲಾ ಖಾನ್, ಅಲೀ ಅಕ್ಬರ್ ಖಾನ್, ವಿಲಾಯತ್ ಖಾನ್, ಅಲ್ಲಾ ರಖಾ, ಬಡೇ ಗುಲಾಮ್ ಅಲೀ ಖಾನ್, ಅಮೀರ್ ಖಾನ್ ಇತ್ಯಾದಿ ಸಂಗೀತಗಾರರ ಸಂಖ್ಯೆ 19ನೇ ಶತಮಾನದ ಮುಸ್ಲಿಮ್ ಸಂಗೀತಗಾರರ ಸಂಖ್ಯೆಗೆ ಹೋಲಿಸಿದರೆ ಬಹಳ ಅಲ್ಪ.  ಸ್ವಾತಂತ್ರ್ಯ ಪೂರ್ವದಲ್ಲಿ ಕೆಲವು ದೊಡ್ಡ ಹಾಗೂ ಹಲವು ಚಿಕ್ಕ ರಾಜಸಂಸ್ಥಾನಗಳು ಬಹಳಷ್ಟು ಜನ ಮುಸ್ಲಿಂ ಸಂಗೀತಗಾರರನ್ನು ಪೋಷಿಸಿದ್ದವು.  ಗ್ವಾಲಿಯರ್, ರಾಮ್‌ಪುರ್, ಇಂದೋರ್, ಬರೋಡಾ, ಹೈದರಾಬಾದ್, ಇಚಲಕರಂಜಿ, ಕೊಲ್ಹಾಪುರ್ ಇತ್ಯಾದಿ ಸಂಸ್ಥಾನಗಳು ಇದರಲ್ಲಿ ಮುಖ್ಯವಾದವು.

ಸ್ವಾತಂತ್ರ್ಯಾನಂತರ ಭಾರತದ ಸಂಗೀತ ಕ್ಷೇತ್ರದಲ್ಲಿ ಆಲ್ ಇಂಡಿಯಾ ರೇಡಿಯೋ ವಹಿಸಿದ ಪಾತ್ರ ಬಹಳ ಮುಖ್ಯ. 1950ರ ದಶಕದಲ್ಲಿ ಆಕಾಶವಾಣಿಯ ಡೈರೆಕ್ಟರ್ ಜನರಲ್ ಆಗಿದ್ದ ಜೆ.ಸಿ. ಮಾಥುರ್ ಪ್ರಕಾರ ಆ ಸಮಯದಲ್ಲಿ ಸುಮಾರು ಹತ್ತುಸಾವಿರ ಜನ ಸಂಗೀತಗಾರರು ಆಕಾಶವಾಣಿಯಿಂದ ಪೂರ್ಣಕಾಲಿಕ ಅಥವಾ ಅರೆಕಾಲಿಕ ನೌಕರಿಯನ್ನು ಪಡೆದಿದ್ದರು.  ಡೇವಿಡ್ ಲೆಲಿವೆಲ್ಡ್ ಎನ್ನುವವನೊಬ್ಬನ ಸಂಶೋಧನೆಯ ಪ್ರಕಾರ ಅವರಲ್ಲಿ ಹೆಚ್ಚಿನವರು ಹಿಂದೂಗಳಾಗಿದ್ದರು ಹಾಗೂ ಉತ್ತಮ ಸಂಗೀತಗಾರ್ತಿಯರಾಗಿದ್ದ ನಾಟ್ಯಗಾತಿಯರು ಹಾಗೂ ವೇಶ್ಯೆಯರು ಇದ್ದಿಲ್ಲವೆಂದೇ ಹೇಳಬಹುದಾಗಿತ್ತು. 1950ರಿಂದ 1962ರವರೆಗೆ ಬಿ. ವಿ. ಕೇಸ್ಕರ್ ಭಾರತದ ಮಾಹಿತಿ ಮತ್ತು ಪ್ರಸಾರ ಮಂತ್ರಿಯಾಗಿದ್ದರು. ಲೆಲಿವೆಲ್ಡ್‌ನ ಪ್ರಕಾರ ಅವರ ನೇತತ್ವದಲ್ಲಿ ನಡೆದ ಪ್ರಕ್ರಿಯೆ ಇದಾಗಿತ್ತು. ಉತ್ಕಟ ಜಾತ್ಯತೀತರಾದ ನೆಹರೂ ಅವರ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದರೂ ತುಂಬಾ ಸ್ಪಷ್ಟವಾಗಿ ವೇಶ್ಯಾಜಾತಿಗೆ ಸೇರಿದವರನ್ನು ಹಾಗೂ ಮುಸ್ಲಿಮ್ ಸಂಗೀತಗಾರರನ್ನು ಆಧುನಿಕ ಸಂಸ್ಥೆಗಳಿಂದ ಹೊರಗಿಟ್ಟ ಪ್ರಯತ್ನವನ್ನು ನಾವಿಲ್ಲಿ ಕಾಣಬಹುದು.  ಲೆಲಿವೆಲ್ಡ್ ಹೇಳುವಂತೆ ಆ ಜಾಗಗಳಲ್ಲಿ ಸಾಕಷ್ಟು ಮರಾಠೀ ಬ್ರಾಹ್ಮಣರು ಭರ್ತಿಗೊಂಡರು.

ಶಾಸ್ತ್ರೀಯ ಸಂಗೀತ ಎಂದರೆ ಏನು ಎಂಬ ಪ್ರಶ್ನೆಗೆ ನಾವು ಇನ್ನೂ ರಾಷ್ಟ್ರೀಯತೆಯ ಸಂದರ್ಭದ ಉತ್ತರವನ್ನೇ ಕೊಡುತ್ತಿದ್ದೇವೆ. ಜಾತಿ, ಮಡಿವಂತಿಕೆ, ಶುದ್ಧೀಕರಣ ಇತ್ಯಾದಿ ಭಾರತೀಯ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಹಾಸುಹೊಕ್ಕಾಗಿವೆ. ಹೀಗೆ ರೂಪುಗೊಂಡ ಶಾಸ್ತ್ರೀಯ ಸಂಗೀತವು ಜಾತಿ, ಧರ್ಮ ಇತ್ಯಾದಿ ಪ್ರಶ್ನೆಗಳನ್ನು ತಾರ್ಕಿಕವಾಗಿ ಮತ್ತು ಬಹಿರಂಗವಾಗಿ ಎದುರಿಸದೇ ಸೂಕ್ಷ್ಮವಾಗಿ, ನಯವಾಗಿ ಮತ್ತು ಆಂತರಿಕವಾಗಿ ನಿಭಾಯಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT