ಮೈಸೂರು: `ಸಂಗೀತ ಭೌತಿಕ ಬಂಧನ ಮೀರಿ ಬೆಳೆದ ಕಲೆ. ಕಣ್ಣಿಗೆ ಕಾಣಿಸು ವುದಿಲ್ಲ; ಕೈಗೆ ಸಿಗುವುದಿಲ್ಲ. ಆದರೆ, ಸ್ಪರ್ಶಕ್ಕೆ ನಿಲುಕುವಂತದ್ದು~ ಎಂದು ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರೇಖರ್ ಹೇಳಿದರು.
ವೀಣೆ ಶೇಷಣ್ಣ (ಗಾನ ಭಾರತೀ) ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀಕೃಷ್ಣ ಜಯಂತಿ ಸಂಗೀತ ಸ್ಪರ್ಧಿಗಳ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
`450 ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವ ಗಾನಭಾರತೀ ಕಾರ್ಯ ಶ್ಲಾಘನೀಯ. ನಾನು ಶಿಕ್ಷಣ ಸಚಿವ ನಾಗಿದ್ದಾಗ ಸರ್ಕಾರಿ ಶಾಲೆಗಳಲ್ಲಿ ಸಂಗೀತ ಶಿಕ್ಷಣವನ್ನು ಕಡ್ಡಾಯ ಗೊಳಿಸಿದ್ದೆ. ಪ್ರತಿಯೊಂದು ಗ್ರಾಮಗಳಲ್ಲೂ ಎರಡು-ಮೂರು ಕಿ.ಮೀ ಅಂತರದಲ್ಲಿ ದೇವಸ್ಥಾನಗಳಿವೆ. ಸಾರ್ವ ಜನಿಕರು ದೇವಸ್ಥಾನ ನಿರ್ಮಾಣಕ್ಕೆ ಧನ ಸಹಾಯ ಮಾಡುತ್ತಾರೆ. ಆದರೆ, ಸಂಗೀತ ಶಾಲೆಗಳಿಗೆ ಧನ ಸಹಾಯ ಮಾಡಲು ಹಿಂದೇಟು ಹಾಕುತ್ತಾರೆ.
ಇದರಿಂದ ಸಂಗೀತ ಶಾಲೆಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗು ತ್ತಿಲ್ಲ~ ಎಂದು ಬೇಸರ ವ್ಯಕ್ತಪಡಿಸಿದರು.
`ಸಾರ್ವಜನಿಕ ಸ್ಥಳ, ಉದ್ಯಾನದಲ್ಲಿ ದೇವಸ್ಥಾನ ನಿರ್ಮಿಸುವುದಕ್ಕೆ ನನ್ನ ವಿರೋಧವಿದೆ. ಹಾಗಂತ ನಾನು ದೇವರು, ಧರ್ಮದ ವಿರೋಧಿ ಅಲ್ಲ.
ನೂರಾರು ಮಂದಿ ವಾಯುವಿಹಾರ ಮಾಡುವ ಉದ್ಯಾನದಲ್ಲಿ ದೇವಸ್ಥಾನ ನಿರ್ಮಿಸುವುದರಿಂದ ಪರಿಸರ ಹಾಳಾ ಗುತ್ತದೆ. ಬೆಂಗಳೂರಿನ 200 ಉದ್ಯಾನದಲ್ಲಿ ದೇವಸ್ಥಾನ ನಿರ್ಮಿಸು ವುದನ್ನು ತಡೆಗಟ್ಟಿ, ವಾಯು ವಿಹಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದೆ. ದೇವ ಸ್ಥಾನಗಳು ಹೆಚ್ಚಾದಂತೆ ಅನಾಥಾಲ ಯಗಳೂ ಹೆಚ್ಚಾಗುತ್ತಿವೆ. ಹಾಗಾದರೆ ಹೆಚ್ಚು ಹೆಚ್ಚು ದೇವಸ್ಥಾನ ಗಳನ್ನು ನಿರ್ಮಾಣ ಮಾಡುವುದರಿಂದ ಏನು ಪ್ರಯೋಜನ?~ ಎಂದು ಪ್ರಶ್ನಿಸಿದರು.
ವಿದ್ವಾನ್ ವಿ.ನಂಜುಂಡಸ್ವಾಮಿ, ವಿದ್ವಾನ್ ಡಾ.ಎಸ್.ಜಯರಾಘವನ್ ಹಾಗೂ ವಿದುಷಿ ಸಿ.ಎಸ್. ನಾಗರತ್ನಮ್ಮ ಅವರನ್ನು ಸನ್ಮಾನಿಸಲಾಯಿತು.
ವಿದ್ವಾನ್ ಡಾ.ಎಸ್. ವಿಜಯ ರಾಘವನ್ (ವೀಣೆ), ವಿದ್ವಾನ್ ಎಚ್. ಎಲ್.ಶಿವಶಂಕರಸ್ವಾಮಿ (ಮೃದಂಗ), ವಿದ್ವಾನ್ ಎಚ್.ಎಲ್.ಅನಂತಕೃಷ್ಣ ಶರ್ಮ (ಘಟಂ) ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಗಾನಭಾರತೀ ಸಂಸ್ಥೆ ಅಧ್ಯಕ್ಷ ಡಾ.ಸಿ.ಜಿ.ನರಸಿಂಹನ್ ಉಪಸ್ಥಿತರಿದ್ದರು.