ತುಮಕೂರು: ಕೇಳುವ ಕಿವಿಗಳಿಗೆ ಸಂಗೀತದ ಸಿಂಚನವಾದರೆ, ನೋಡುವ ಕಣ್ಗಳಿಗೆ ನೃತ್ಯದ ಸೊಬಗೂ ದಕ್ಕಿತು. ಸಂಗೀತದ ಮಾಧುರ್ಯ, ನೃತ್ಯದ ಮೋಡಿಗೆ ಅಲ್ಲಿ ತಲೆದೂಗವರೇ ಇಲ್ಲ. ಹಾಸಣಗಿಯ ಗಾನಸುಧೆ, ನಾಟ್ಯಶಾರದೆ ಶೋಭನಾ ನೃತ್ಯದ ಸೊಬಗು ಜಿಲ್ಲೆಯ ಜನತೆಯ ಮನದಲ್ಲಿ ಅಚ್ಚಳಿಯದೇ ದಾಖಲಾದವು.
ಮೂರನೇ ದಿನದ ಜಿಲ್ಲಾ ಉತ್ಸವದಲ್ಲಿ ಶನಿವಾರ ಸುಗಮ ಸಂಗೀತ, ಹಿಂದೂಸ್ಥಾನಿ ಸಂಗೀತ, ಭರತನಾಟ್ಯ, ಪಂಜಾಬಿನ ಬಾಂಗ್ಡಾ ನೃತ್ಯ..... ಪ್ರೇಕ್ಷಕರಿಗೆ ರಸದೌತಣ ಉಣಬಡಿಸಿದವು.
ಅಂತರರಾಷ್ಟ್ರೀಯ ಖ್ಯಾತಿಯ ಹಿಂದೂಸ್ಥಾನಿ ಸಂಗೀತ ಗಾಯಕ ಪಂಡಿತ್ ಗಣಪತಿ ಭಟ್ ಹಾಸಣಗಿ ತಮ್ಮ ಕಂಠಮಾಧುರ್ಯದಿಂದ ಗಾನ ಸುಧೆ ಹರಿಸಿದರು. ಹಾಸಣಗಿಯ ಗಾಯನದ ಮೋಡಿಗೆ ಸಂಗೀತ ಪ್ರೇಮಿಗಳು ತಲೆದೂಗಿದರು.
ನೃತ್ಯ ಕಲಾವಿದ ಅಶೋಕ್ ಕುಮಾರ್ ಗರಡಿಯಲ್ಲಿ ಪಳಗಿರುವ ಪ್ರತಿಭಾನ್ವಿತೆ ಕಲಾವಿದೆಯರು ಉತ್ತರ, ದಕ್ಷಿಣ ಭಾರತದ ಶೈಲಿಯ ನೃತ್ಯ ಪ್ರಾಕಾರಗಳನ್ನು ಪ್ರಸ್ತುತಪಡಿಸಿ, ಪ್ರೇಕ್ಷಕರ ಮನಗೆದ್ದರು.
ಸಾಂಪ್ರಾದಾಯಿಕ ‘ಅಲರಿಪು’ವಿನಿಂದ ನೃತ್ಯ ಆರಂಭಿಸಿದ ಶೋಭನಾ ಮತ್ತು ತಂಡದ ಕಲಾವಿದರು ‘ಮಾತೆಯೇ ಮಲಯಧ್ವಜ ಪಾಡ್ಯಸಂಜಾತೆ ಮಾತಂಗ....’ ರಚನೆಗೂ ಮತ್ತು ‘ವಂದೆ ಮಾತರಂ...; ಗೀತೆಗೂ ಲತೆಯಂತೆ ಬಳುಕಿದರು. ನವಿಲುಗಳಂತೆ ನರ್ತಿಸಿದರು.
ಗಾಯಕ ರಘು ದೀಕ್ಷಿತ್ ಮತ್ತು ತಂಡದ ಪಾಪ್ ಸಂಯೋಜಿತ ವಿಭಿನ್ನ ಶೈಲಿಯ ಗಾಯನ ಮತ್ತು ನೃತ್ಯ ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಇಟ್ಟಿತು.
ಸನ್ಮಾನ: ಹಿರಿಯ ಚಿತ್ರನಟಿ ಲೀಲಾವತಿ ಮತ್ತು ಅವರ ಪುತ್ರ ನಟ ವಿನೋದ್ ರಾಜ್ಕುಮಾರ್, ನಟ ಶ್ರೀಮುರಳಿ, ನಟಿ ಪೂಜಾಗಾಂಧಿ, ಛಾಯಾಗ್ರಾಹಕ ಕೆ.ಎಂ. ವೀರೇಶ್ ಅವರನ್ನು ಇದೇ ಸಂದರ್ಭದಲ್ಲಿ ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು.