ವಾಷಿಂಗ್ಟನ್ (ಪಿಟಿಐ, ಐಎಎನ್ಎಸ್): ದೇವಯಾನಿ ಖೋಬ್ರಾಗಡೆ ಅವರ ಮನೆ ಕೆಲಸ ಮಾಡುತ್ತಿದ್ದ ಸಂಗೀತಾ ರಿಚರ್ಡ್ ಅವರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಅಮೆರಿಕ ಮನೆ ಕೆಲಸದವರ ಸಂಘಟನೆಗಳ ಸದಸ್ಯರು ಇಲ್ಲಿನ ಭಾರತೀಯ ರಾಯಭಾರ ಕಚೇರಿ ಎದುರು ಶನಿವಾರ ಮತಪ್ರದರ್ಶನ ನಡೆಸಿದರು.
ರಾಜತಾಂತ್ರಿಕ ವಿನಾಯ್ತಿ ನೆಪದಲ್ಲಿ ದೇವಯಾನಿ ಅವರು ಪ್ರಕರಣದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಸಂಗೀತಾ ಅವರಿಗೆ ನ್ಯಾಯ ದೊರಕಬೇಕಾದರೆ ದೇವಯಾನಿ ಅವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಖರ್ಷಿದ್ ಹೇಳಿಕೆಗೆ ಸ್ವಾಗತ: ರಾಜತಾಂತ್ರಿಕ ಅಧಿಕಾರಿ ದೇವಯಾನಿ ಅವರ ಬಂಧನದಿಂದ ಉಂಟಾಗಿರುವ ರಾಜತಾಂತ್ರಿಕ ಬಿಕ್ಕಟ್ಟು ಭಾರತ ಮತ್ತು ಅಮೆರಿಕ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಬಾರದೆಂಬ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಅವರ ಹೇಳಿಕೆಯನ್ನು ಅಮೆರಿಕ ವಿದೇಶಾಂಗ ಖಾತೆಯ ವಕ್ತಾರೆ ಜೆನ್ ಸಾಕಿ ಸ್ವಾಗತಿಸಿದ್ದಾರೆ.
ಅಮೆರಿಕ ಪುನರುಚ್ಚಾರ: ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಅವರನ್ನು ವಿಶ್ವಸಂಸ್ಥೆಗೆ ವರ್ಗಾವಣೆ ಮಾಡಿದ್ದರೂ ಅವರ ವಿರುದ್ಧದ ವೀಸಾ ವಂಚನೆ ಪ್ರಕರಣವನ್ನು ರದ್ದುಪಡಿಸುವುದಿಲ್ಲ ಎಂದು ಅಮೆರಿಕ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ದೇವಯಾನಿ ವಿಶ್ವಸಂಸ್ಥೆಗೆ ವರ್ಗಾವಣೆ ಆಗಿರುವುದರಿಂದ ಅವರಿಗೆ ರಾಜತಾಂತ್ರಿಕ ವಿನಾಯ್ತಿಯ ಸೌಲಭ್ಯವಿದ್ದರೂ, ವೀಸಾ ವಂಚನೆ ಎಸಗುವಾಗ ಈ ಸೌಲಭ್ಯ ಇಲ್ಲದೆ ಇದ್ದುದರಿಂದ ಅವರ ವಿರುದ್ಧದ ಪ್ರಕರಣ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಅಮೆರಿಕ ಹೇಳಿದೆ. ಆದರೂ ಭಾರತ ಮತ್ತು ಅಮೆರಿಕ ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವ ಮಾತನಾಡುತ್ತಿವೆ.
ವಿಶ್ವಸಂಸ್ಥೆ ಪರಿಶೀಲನೆ: ದೇವಯಾನಿ ಅವರನ್ನು ವಿಶ್ವಸಂಸ್ಥೆಗೆ ವರ್ಗಾವಣೆ ಮಾಡಿರುವ ಅಧಿಸೂಚನೆ ಭಾರತ ಸರ್ಕಾರದಿಂದ ಬಂದಿದ್ದು, ನಿಯಮಗಳ ಪ್ರಕಾರ ಅದನ್ನು ಪರಿಶೀಲಿಸಲಾಗುತ್ತಿದೆ ಎಂದು ವಿಶ್ವಸಂಸ್ಥೆಯ ವಕ್ತಾರ ಫರಾನ್ ಹಕ್ ತಿಳಿಸಿದ್ದಾರೆ.
ದೇವಯಾನಿ ವಿರುದ್ಧದ ಕ್ರಿಮಿನಲ್ ಪ್ರಕರಣವು ವಿಶ್ವಸಂಸ್ಥೆಯ ಮಾನ್ಯತಾ ಪತ್ರ ಪಡೆಯಲು ಅಡ್ಡಿಯಾಗುವ ವಿಚಾರ ಮತ್ತು ರಾಜತಾಂತ್ರಿಕ ವಿನಾಯ್ತಿ ಸೌಲಭ್ಯದ ಬಗ್ಗೆ ತಾವು ಏನನ್ನೂ ಹೇಳುವುದಿಲ್ಲ ಎಂದು ಅವರು ಹೇಳಿದ್ದಾರೆ.
ಭಾರತದ ಮಾಧ್ಯಮಗಳ ಟೀಕೆ: ರಾಜತಾಂತ್ರಿಕ ಅಧಿಕಾರಿ ದೇವಯಾನಿ ಅವರು ಅಪರಾಧವೆಸಗಿದ್ದರೂ ಭಾರತದ ಮಾಧ್ಯಮಗಳು ವಾಸ್ತವಾಂಶಕ್ಕೆ ವಿರುದ್ಧವಾದ ಸುದ್ದಿಗಳನ್ನು ಪ್ರಕಟಿಸುತ್ತಿವೆ ಎಂದು ಅಮೆರಿಕದ ಮಾಧ್ಯಮಗಳು ಟೀಕಿಸಿವೆ.
ವಾಸ್ತವಾಂಶವನ್ನು ತಿರುಚಿ ವರದಿ ಮಾಡಿರುವ ಭಾರತದ ಮಾಧ್ಯಮಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ವರ್ತಿಸಿವೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ಆರೋಪಿಸಿದೆ.
ಭಾರತದ ಪ್ರಧಾನಿ ಮತ್ತು ಇತರ ಸಚಿವರು, ದೇವಯಾನಿ ಅವರನ್ನು ಸಮರ್ಥಿಸಿಕೊಂಡು ಮಾತನಾಡಿರುವುದನ್ನು ಕೆಲವು ಅಂಕಣಕಾರರು ಟೀಕಿಸಿದ್ದಾರೆ.
ಪಾಕ್ ಪತ್ರಿಕೆ ಮೆಚ್ಚುಗೆ
(ಇಸ್ಲಾಮಾಬಾದ್ ವರದಿ): ಮಹಿಳಾ ರಾಜತಾಂತ್ರಿಕ ಅಧಿಕಾರಿಯನ್ನು ಅಮೆರಿಕದ ಅಧಿಕಾರಿಗಳು ಬಂಧಿಸಿದ್ದಕ್ಕೆ ಭಾರತ ನೀಡಿದ ದಿಟ್ಟ ಪ್ರತಿಕ್ರಿಯೆಯನ್ನು ನೋಡಿ ಪಾಕಿಸ್ತಾನ ಪಾಠ ಕಲಿಯಬೇಕು ಎಂದು ‘ಡೈಲಿ ಟೈಮ್ಸ್’ ಹೇಳಿದೆ.
ದೇಶದ ಗೌರವಕ್ಕೆ ಧಕ್ಕೆಯಾದಾಗ ಭಾರತದ ಜನತೆ ಮತ್ತು ಸರ್ಕಾರ ಕಠೋರವಾಗಿ ಪ್ರತಿಕ್ರಿಯಿಸಿದ್ದು, ಪಾಕಿಸ್ತಾನ ಇದನ್ನು ನೋಡಿ ಕಲಿಯಬೇಕು ಎಂದು ಪತ್ರಿಕೆ ಸಂಪಾದಕೀಯದಲ್ಲಿ ಸಲಹೆ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.