ಬೆಂಗಳೂರು: ಜಯನಗರ ಎಂಟನೇ ಹಂತದ ಜಯರಾಮ ಸೇವಾ ಮಂಡಳಿ ಬಳಿ ಭಾನುವಾರ ಕಾರ್ತಿಕ ಮಾಸದ ಅಂಗವಾಗಿ ದೀಪೋತ್ಸವ ಆಯೋಜಿಸಿದ್ದ ಸಂಘಟಕರು ಸಂಚಾರ ಪೊಲೀಸರಿಂದ ಪೂರ್ವಾನುಮತಿ ಪಡೆಯದೆ ಮಂಡಳಿಯ ಮುಂಭಾಗದ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಿದ್ದರಿಂದ ಸ್ಥಳೀಯ ನಿವಾಸಿಗಳಿಗೆ ತೀವ್ರ ತೊಂದರೆಯಾಯಿತು.
ಮಂಡಳಿಯ ಮುಂಭಾಗದ ಒಂದನೇ ಮುಖ್ಯರಸ್ತೆಯಲ್ಲಿ ಮಧ್ಯಾಹ್ನ 3ರಿಂದ ರಾತ್ರಿ 7ರ ವರೆಗೂ ಕಾನೂನು ಬಾಹಿರವಾಗಿ ಬ್ಯಾರಿಕೇಡ್ ಹಾಕಿದ್ದ ಸಂಘ ಟಕರು, ಆ ಭಾಗದಲ್ಲಿ ವಾಹನ ಗಳ ಓಡಾಟವನ್ನು ಸಂಪೂರ್ಣ ನಿರ್ಬಂಧಿಸಿದರು. ಅಲ್ಲದೇ, ದೀಪೋತ್ಸವದ ಭಾಗವಾಗಿ ರಸ್ತೆಯ ಮಧ್ಯ ಭಾಗದಲ್ಲೇ ರಂಗೋಲಿ ಸ್ಪರ್ಧೆ ಏರ್ಪಡಿಸಿದ್ದರು.
ಇದರಿಂದಾಗಿ ಮುಖ್ಯರಸ್ತೆಯ ನಿವಾಸಿಗಳು ಪರದಾಡಿದರು. ಅವರ ವಾಹನಗಳಿಗೆ ಮನೆ ಯಿಂದ ಹೊರ ಹೋಗಲು ಮತ್ತು ಒಳ ಬರಲು ಸ್ಥಳಾವಕಾಶ ವಿಲ್ಲದೆ ಹೆಚ್ಚಿನ ತೊಂದರೆಯಾ ಯಿತು. ಅವರು ಸಾಕಷ್ಟು ದೂರ ದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ಮನೆಗೆ ನಡೆದು ಹೋಗುತ್ತಿದ್ದ ದೃಶ್ಯ ಕಂಡುಬಂತು.
ಇನ್ನು ಕಾರ್ಯಕ್ರಮಕ್ಕೆ ಬಂದಿದ್ದ ಭಕ್ತರು, ಸ್ಥಳೀಯರ ಮನೆಗಳ ಮುಂಭಾಗದಲ್ಲಿ ಮತ್ತು ಅಕ್ಕಪಕ್ಕದ ರಸ್ತೆಗಳಲ್ಲಿ ಮನಬಂದಂತೆ ವಾಹನ ನಿಲುಗಡೆ ಮಾಡಿದ್ದರು. ಇದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ಸಂಚಾರ ಅಸ್ತವ್ಯಸ್ತವಾಗಿ ಹಲವು ತಾಸುಗಳವರೆಗೆ ವಾಹನ ದಟ್ಟಣೆ ಉಂಟಾಗಿತ್ತು.
ಇದರಿಂದ ಅಸಮಾಧಾನ ಗೊಂಡ ಸ್ಥಳೀಯರು, ರಸ್ತೆಗೆ ಹಾಕಿದ್ದ ಬ್ಯಾರಿಕೇಡ್ಗಳನ್ನು ತೆರವುಗೊಳಿಸಿ ವಾಹನ ಸಂಚಾ ರಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದರು. ಆದರೆ, ಮನವಿಗೆ ಸ್ಪಂದಿಸದ ಸಂಘಟಕರು ಸ್ಥಳೀಯರೊಂದಿಗೆ ವಾಗ್ವಾದ ನಡೆಸಿದರು. ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಬ್ಯಾರಿಕೇಡ್ ಗಳನ್ನು ತೆರವುಗೊಳಿಸಲು ಮುಂದಾದರು.
ಈ ವೇಳೆ ಸಂಘಟಕರು ಪೊಲೀಸರ ಜತೆ ಯೂ ಮಾತಿನ ಚಕಮಕಿ ನಡೆಸಿ ದರು. ನಂತರ ಹಿರಿಯ ಅಧಿಕಾರಿ ಗಳು ಹೆಚ್ಚಿನ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದು ಬ್ಯಾರಿಕೇಡ್ ಗಳನ್ನು ತೆರವುಗೊಳಿಸಿದರು. ಬಳಿಕ ವಾಹನ ಸಂಚಾರ ಸುಗಮವಾಯಿತು. ‘ಕಾರ್ಯಕ್ರಮದ ಸಂಘ ಟಕರು ಪ್ರತಿ ವರ್ಷ ಇದೇ ರೀತಿ ತೊಂದರೆ ಉಂಟುಮಾಡು ತ್ತಿದ್ದಾರೆ.
ಈ ಬಗ್ಗೆ ಪ್ರಶ್ನಿಸಲು ಹೋದರೆ ಬೆದರಿಕೆ ಹಾಕುತ್ತಾರೆ. ಈ ರೀತಿ ಧಾರ್ಮಿಕ ಕಾರ್ಯ ಕ್ರಮದ ನೆಪ ಮಾಡಿಕೊಂಡು ಜನರಿಗೆ ತೊಂದರೆ ಮಾಡು ವವರ ವಿರುದ್ಧ ಪೊಲೀಸರು ಶಿಸ್ತು ಕ್ರಮ ಜರುಗಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸಿದರು.
ಅನುಮತಿ ಪಡೆದಿರಲಿಲ್ಲ
ಕಾರ್ಯಕ್ರಮದ ಸಂಘಟಕರು ರಸ್ತೆಯ ಅಕ್ಕಪಕ್ಕ ವಿದ್ಯುತ್ ದೀಪಾಲಂಕಾರ ಮಾಡಲು ಮತ್ತು ಮಂಡಳಿಯ ಬಳಿ ಧ್ವನಿವರ್ಧಕ ಹಾಕಲು ಜಯನಗರ ಕಾನೂನು ಮತ್ತು ಸುವ್ಯವಸ್ಥೆ ಠಾಣೆಯಿಂದ ಅನುಮತಿ ಪಡೆದುಕೊಂಡಿದ್ದರು. ಆದರೆ, ವಾಹನ ಸಂಚಾರ ನಿರ್ಬಂಧಿಸಲು ನಮ್ಮ ಠಾಣೆಯಿಂದ ಯಾವುದೇ ಅನುಮತಿ ಪಡೆದಿರಲಿಲ್ಲ.
–ಶೋಭಾ ಎಸ್.ಖಟಾವ್ಕರ್ ಇನ್ಸ್ಪೆಕ್ಟರ್, ಜಯನಗರ ಸಂಚಾರ ಠಾಣೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.