ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರ ನಿರ್ವಹಣೆ ಜವಾಬ್ದಾರಿಯನ್ನು ಸ್ವಯಂಸೇವಾ ಸಂಘಟನೆಗಳು, ಸ್ವಸಹಾಯ ಗುಂಪುಗಳು, ಚಿಂದಿ ಆಯುವವರ ಸಂಘ ಹಾಗೂ ವಿವಿಧ ಸಂಸ್ಥೆಗಳಿಗೆ ನೀಡಲು ಪಾಲಿಕೆ ತೀರ್ಮಾನಿಸಿದೆ.
ಆಸಕ್ತರು ವಲಯಗಳ ಹೆಚ್ಚುವರಿ ಅಥವಾ ಜಂಟಿ ಆಯುಕ್ತರನ್ನು 15 ದಿನಗಳೊಳಗೆ ಸಂಪರ್ಕಿಸಿ ಪಾಲಿಕೆಯ ನೀತಿ ಹಾಗೂ ನಿಯಮಾನುಸಾರ ಒಪ್ಪಂದ ಮಾಡಿಕೊಂಡು ಕೇಂದ್ರಗಳ ನಿರ್ವಹಣೆ ಮಾಡಬಹುದು.
ನಗರದಲ್ಲಿ ಉದ್ಭವಿಸಿರುವ ಕಸದ ಸಮಸ್ಯೆಯನ್ನು ಬಗೆಹರಿಸಲು ಮೂಲದಲ್ಲಿಯೇ ಘನತ್ಯಾಜ್ಯ ವಿಂಗಡಣೆಯನ್ನು ಕಡ್ಡಾಯಗೊಳಿಸಲಾಗಿದೆ. ಪ್ರತಿ ವಾರ್ಡ್ನಲ್ಲೂ ಒಣ ತ್ಯಾಜ್ಯ ವಿಲೇವಾರಿ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈಗಾಗಲೇ 51 ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರಗಳು ನಿರ್ಮಾಣವಾಗಿವೆ.
ದಕ್ಷಿಣ ವಲಯದಲ್ಲಿ ಐದು, ಪಶ್ಚಿಮ ವಲಯದಲ್ಲಿ ಒಂಬತ್ತು, ಪೂರ್ವ ವಲಯದಲ್ಲಿ 13, ಮಹದೇವಪುರ ವಲಯದಲ್ಲಿ ಒಂದು, ಬೊಮ್ಮನಹಳ್ಳಿ ವಲಯದಲ್ಲಿ 10, ರಾಜರಾಜೇಶ್ವರಿನಗರ ವಲಯದಲ್ಲಿ ಮೂರು, ಯಲಹಂಕ ವಲಯದಲ್ಲಿ ಏಳು ಹಾಗೂ ದಾಸರಹಳ್ಳಿ ವಲಯದಲ್ಲಿ ಮೂರು ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಉಳಿದ ವಾರ್ಡ್ಗಳಲ್ಲಿಯೂ ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಹಂಗಾಮಿ ಆಯುಕ್ತ ಸಿದ್ದಯ್ಯ ತಿಳಿಸಿದ್ದಾರೆ.