ತುರುವೇಕೆರೆ: ಸಮುದಾಯದ ಹಿತಾಸಕ್ತಿ ಇಲ್ಲದ ಸ್ವಾರ್ಥ ಬದುಕು ಮಿತಿ ಮೀರಿದ ಭ್ರಷ್ಟಾಚಾರ ಮತ್ತು ಅರಾಜಕತೆಗೆ ಕಾರಣವಾಗಿದೆ. ವಿದ್ಯಾರ್ಥಿಗಳು ಮುಂದಿನ ರಾಜಕೀಯ ಧೃವೀಕರಣದ ರೂವಾರಿಗಳಾಗಿದ್ದು ಜೆ.ಪಿ. ರೂಪಿಸಿದ ಆಂದೋಲನ ಮಾದರಿಯಲ್ಲಿ ಸಂಘಟಿತ ಹೋರಾಟ ನಡೆಸಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಕರೆ ನೀಡಿದರು.
ಪಟ್ಟಣದ ಸರ್ಕಾರಿ. ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಉತ್ಸವ ಉದ್ಘಾಟಿಸಿ ಮಾತನಾಡಿ, ದೇಸೀ ಕೌಶಲ ಆಧುನಿಕತೆ ಆಕ್ರಮಣಕ್ಕೆ ಬಲಿಯಾಗಿದೆ. ಇಂತಹ ಪರ್ವ ಕಾಲದಲ್ಲಿ ವಿದ್ಯಾರ್ಥಿಗಳು ಸ್ವಸಾಮರ್ಥ್ಯದಿಂದ ಬದುಕು ರೂಪಿಸಿಕೊಳ್ಳಬೇಕು. ಜೊತೆಗೆ ರಾಷ್ಟ ನಿರ್ಮಾಣದ ನೈತಿಕ ಹೊಣೆ ಹೊರಬೇಕು ಎಂದರು.
ಜಿಲ್ಲಾ ಸಿರಿಗನ್ನಡ ವೇದಿಕೆ ಅಧ್ಯಕ್ಷ ಎಂ.ಜಿ.ಸಿದ್ಧರಾಮಯ್ಯ ಮಾತನಾಡಿ, ವಿದ್ಯಾರ್ಥಿಗಳು ಹಿಂಸೆ ಮತ್ತು ವಿಕಾರತೆ ಪ್ರಚೋದಿಸುವ ದೃಶ್ಯ ಮಾಧ್ಯಮಗಳಿಂದ ದೂರವಿದ್ದು, ಅಕ್ಷರ ಸಂಸ್ಕೃತಿಯನ್ನು ಪುನರ್ ಸ್ಥಾಪಿಸುವ ಸಂಕಲ್ಪ ಮಾಡಬೇಕು ಎಂದರು.
ಬಿಇಒ ಎನ್.ದೇವರಾಜ್, ಪ.ಪಂ. ಅಧ್ಯಕ್ಷ ಆರ್.ಮಲ್ಲಿಕಾರ್ಜುನ್, ನೌಕರರ ಸಂಘದ ಅಧ್ಯಕ್ಷ ಪ್ರಹ್ಲಾದ್ ಮಾತನಾಡಿದರು. ಪ್ರಾಂಶುಪಾಲ ಗಣೇಶಮೂರ್ತಿ, ಜಿ.ಪಂ. ಸದಸ್ಯ ಎ.ಬಿ.ಜಗದೀಶ್, ವಕೀಲ ಮುದ್ದೇಗೌಡ ಉಪಸ್ಥಿತರಿದ್ದರು. ಆನಂದ್, ರಾಜಣ್ಣ ಹಾಗೂ ಅಂಗವಿಕಲ ವಿದ್ಯಾರ್ಥಿ ಕುರ್ಹಾನ್ಅಹಮದ್ ಅವರನ್ನು ಸನ್ಮಾನಿಸಲಾಯಿತು. ಕೆ.ಎಸ್.ನಾಗರಾಜಪ್ಪ ಸ್ವಾಗತಿಸಿದರು. ಪುಟ್ಟೇಗೌಡ ವಂದಿಸಿದರು. ಉಪನ್ಯಾಸಕ ಎಂ.ಎನ್.ರಾಮಯ್ಯ ನಿರೂಪಿಸಿದರು.