ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘರ್ಷ ಬಿಟ್ಟು ಸೌಲಭ್ಯ ನೀಡಿದ ಒಡೆಯರ್

Last Updated 8 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  `ಮೈಸೂರಿನ ಬೆಳವಣಿಗೆಗೆ ಜಯಚಾಮರಾಜೇಂದ್ರ ಒಡೆಯರ ಅವರ ಪಾತ್ರ ಬಹುಮುಖ್ಯವಾಗಿದೆ~ ಎಂದು ಗುಲ್ಬರ್ಗ ಕೇಂದ್ರೀಯ ವಿಶ್ವವಿದ್ಯಾಲಯದ ಸಹ ಕುಲಪತಿ ಡಾ.ಎಸ್. ಚಂದ್ರಶೇಖರ್ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯವು ಮಿಥಿಕ್ ಸೊಸೈಟಿಯ ಸಹಯೋಗದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ `ಜಯಚಾಮರಾಜೇಂದ್ರ ಒಡೆಯರ ಕಾಲದ ಮೈಸೂರು ಸಂಸ್ಥಾನ~ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಾಗೂ `ದಿವಾನ್ ಸರ್ ಮಿರ್ಜಾ ಎಂ. ಇಸ್ಮಾಯಿಲ್ ಕಾಲದ ಮೈಸೂರು ಸಂಸ್ಥಾನ~ ಕೃತಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಸಾಮಾಜಿಕವಾಗಿ ಜನ ಸಮುದಾಯಗಳು ತಮ್ಮ ಸೌಲಭ್ಯಗಳನ್ನು ಪಡೆಯಲು ಮಾಡಿದ ಚಳವಳಿಗೆ ಒಡೆಯರು ಬೆಂಬಲವನ್ನು ನೀಡಿದರು. ಕೆಂಗಲ್ ಹನುಂತಯ್ಯನವರು ತಮ್ಮ ದಿನಚರಿಯಲ್ಲಿ ದಲಿತ ವರ್ಗಗಳಿಗೆ ಚುನಾವಣೆಗಳಲ್ಲಿ ನೀಡಿದ ಸ್ಥಾನಗಳ ಬಗ್ಗೆ ಬರೆಯುವಾಗ ಇದು ಕೂಡ ಒಂದು ಮಹಾಯುದ್ಧದ ಹೋರಾಟದಂತೆ ಒಂದು ಬೃಹತ್ ಹೋರಾಟವಾಗಿತ್ತು ಎಂದು ನಮೂದಿಸಿದ್ದರು~ ಎಂದು ಅವರು ಸ್ಮರಿಸಿದರು. 

`ಒಡೆಯರು ರಾಜಕೀಯ ಸಂಘರ್ಷಗಳನ್ನು ತಡೆಯಲು  ಸಾಮಾಜಿಕವಾಗಿ ಜನರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದವರಾಗಿದ್ದರು. ಯಾವುದೇ ಕಾಲಘಟ್ಟದಲ್ಲಿ ಸಂಘರ್ಷದ ಹಾದಿ ಹಿಡಿಯಲಿಲ್ಲ, ಬದಲಾಗಿ ಸನ್ನಿವೇಶವನ್ನು ಅರ್ಥಮಾಡಿಕೊಳ್ಳುತ್ತ್ದ್ದಿದರು. ಆ ದಿಸೆಯಲ್ಲಿ ಬೆಳಕು ತೋರಿಸುವುದರ ಕಡೆಗೆ ಸಂಶೋಧಕರು ಪ್ರಯತ್ನಿಸಬೇಕು.

ಆದರೆ, ಇಂದು ಜನಪ್ರತಿನಿಧಿಗಳು ತೀವ್ರವಾದ ಚಳವಳಿಯಲ್ಲಿ ಕಾಣುವುದು ಅಪರೂಪವಾಗಿದೆ~ ಎಂದು ಹೇಳಿದರು.
ದಿವಾನ್ ಸರ್ ಮಿರ್ಜಾ ಎಂ. ಇಸ್ಮಾಯಿಲ್ ಕಾಲದ ಮೈಸೂರು ಸಂಸ್ಥಾನ ಕೃತಿಯನ್ನು ತುಮಕೂರು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಓ.ಅನಂತರಾಮಯ್ಯ ಬಿಡುಗಡೆ ಮಾಡಿ, `ಮೈಸೂರಿನಲ್ಲಿ 9 ಜಿಲ್ಲೆಗಳ ಪ್ರಜೆಗಳ ಕಲ್ಯಾಣಕ್ಕಾಗಿ ಕಾರ್ಯಗಳನ್ನು ಜಾರಿಗೆ ತಂದಿದ್ದು,

1918ರ ಮಿಲ್ಲರ್ ಸಮಿತಿಯ ಕಾರ್ಯಗಳನ್ನು ಸ್ವತಃ ಒಡೆಯರೆ ನೋಡಿಕೊಳ್ಳುತ್ತಿದ್ದರು. ದಲಿತರಿಗೆ ಶಿಕ್ಷಣದಲ್ಲಿ ಶುಲ್ಕ ವಿನಾಯಿತಿ, ಹಾಸ್ಟೆಲ್  ನಿರ್ಮಾಣ ಮಾಡಿ, ಎಲ್ಲ ಜನಾಂಗಕ್ಕೆ ಶೈಕ್ಷಣಿಕವಾಗಿ ಮುಂದೆ ಬರಲು ಸಹಾಯವನ್ನು ಮಾಡಿದ್ದರು~ ಎಂದರು.

`ಆ ಕಾಲದಲ್ಲಿ ಅನಿಷ್ಟ ಪದ್ಧತಿಗಳಾದ ಬಾಲ್ಯ ವಿವಾಹ, ಸತಿ ಸಹಗಮನ, ದೇವದಾಸಿ ಪದ್ಧತಿ ಹಾಗೂ ಇನ್ನೂ ಅನೇಕ ಪದ್ಧತಿಗಳನ್ನು ತೊಡೆದು ಹಾಕಿದರು. ಕರ್ನಾಟಕ ಏಕೀಕರಣದಲ್ಲಿ ಕನ್ನಡ ಬೆಳೆಯಲು ಕಾರಣಿಕರ್ತರಾಗಿದ್ದವರು. ಕನ್ನಡ ರಾಷ್ಟ್ರಭಾಷೆಯಾಗಲು ಪ್ರಯತ್ನಿಸಿ, ಕಲೆ, ಸಾಹಿತ್ಯ, ಸಂಗೀತಕ್ಕೆ ಹೆಚ್ಚು ಒತ್ತನ್ನು ಕೊಟ್ಟಿದ್ದರು~ ಎಂದು ಹೇಳಿದರು.

ಹಂಪಿ ವಿಶ್ವವಿದ್ಯಾಲಯ ಪ್ರಭಾರಿ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ಮಾತನಾಡಿ, `ಕನ್ನಡ ವಿಶ್ವವಿದ್ಯಾಲಯವು ನಿರ್ಲಕ್ಷ್ಯಗೊಳಗಾದವುಗಳ ಬಗ್ಗೆ ಒತ್ತು ಕೊಡುವ ಕೆಲಸವನ್ನು ಮಾಡಲಿದ್ದು, ಹೊಸ ಪೀಳಿಗೆಯು ನೋಡುವ ರೀತಿಯಲ್ಲಿ ವೈಚಾರಿಕ ದೃಷ್ಟಿಕೋನದಿಂದ ವಿಶ್ವವಿದ್ಯಾಲಯವು ನಡೆಯುತ್ತಿದೆ `ಎಂದರು.

 `ಜಯಚಾಮರಾಜೇಂದ್ರ ಕಾಲದಲ್ಲಿನ ಸಂಘರ್ಷಗಳ ಕುರಿತು ವಿಶ್ವವಿದ್ಯಾಲಯ ಪುಸ್ತಕವನ್ನು ತರಲಿದ್ದು, ಕರ್ನಾಟಕ ಆಗುಹೋಗುಗಳ ಕುರಿತು ಚಿಂತನೆ ಮಾಡುವ ರೀತಿಯಲ್ಲಿ ವಿಶ್ವವಿದ್ಯಾಲಯ ಕೆಲಸವನ್ನು ಮಾಡಲಿದೆ~ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಪಿ.ವಿ.ನಂಜರಾಜ ಅರಸು, ಮಿಥಿಕ್ ಸೊಸೈಟಿ ಗೌರವ ಅಧ್ಯಕ್ಷ ಡಾ.ಎಂ.ಕೆ.ಎಲ್.ಎಲ್. ಶಾಸ್ತ್ರಿ, ಬೆಂಗಳೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕರಾದ ಡಾ.ಎಂ.ಜಮುನ ಹಾಗೂ ಹಂಪಿ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಮುಖ್ಯಸ್ಥರಾದ ಡಾ. ಎನ್.ಚಿನ್ನಸ್ವಾಮಿ ಸೋಸಲೆ ಮತ್ತಿತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT