ಬೆಂಗಳೂರು: ನಗರ ಸಂಚಾರ ಪೊಲೀಸರಿಗೆ ಉಚಿತ ನೇತ್ರ ತಪಾಸಣೆ ನಡೆಸುವ `ಪೊಲೀಸ್ ವಿಷನ್ ಅವರ್ ಮಿಷನ್~ ಕಾರ್ಯಕ್ರಮಕ್ಕೆ ನಾರಾಯಣ ನೇತ್ರಾಲಯದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.
ಅಶೋಕನಗರದ ಕ್ಯಾಸಲ್ ಸ್ಟ್ರೀಟ್ನಲ್ಲಿರುವ ನಾರಾಯಣ ನೇತ್ರಾಲಯ-3 ರಲ್ಲಿ ನಡೆದ ಕಾರ್ಯಕ್ರಮಕ್ಕೆ ಪೂರ್ವ ಸಂಚಾರ ವಿಭಾಗದ ಡಿಸಿಪಿ ಎನ್. ಮುತ್ತಣ್ಣ ಚಾಲನೆ ನೀಡಿದರು.
`ಸಂಚಾರ ಪೊಲೀಸರು ಹೆಚ್ಚಿನ ಸಮಯ ರಸ್ತೆಗಳಲ್ಲಿ ಕಳೆಯುತ್ತಾರೆ. ಸುಮಾರು ಹನ್ನೆರಡು ಗಂಟೆ ಕಾಲ ಕೆಲಸ ಮಾಡುವ ಅವರು ದೂಳು, ಹೊಗೆಯಿಂದಾಗಿ ಕಣ್ಣಿನ ತೊಂದರೆ ಅನುಭವಿಸುತ್ತಾರೆ. ಕೆಲವರು ರಕ್ತದೊತ್ತಡ ಮಧುಮೇಹದಿಂದಲೂ ಬಳಲುತ್ತಾರೆ~ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ಕೆ.ಭುಜಂಗಶೆಟ್ಟಿ ಹೇಳಿದರು.
`ಪೊಲೀಸರಿಗೆ ತಪಾಸಣೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಗರದಲ್ಲಿರುವ ನಮ್ಮ ಮೂರು ಆಸ್ಪತ್ರೆಗಳಲ್ಲಿ ಯಾವುದಾದರೂ ಒಂದು ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳಬಹುದು. ಆಯ್ದ ಪೊಲೀಸ್ ಠಾಣೆ ಮತ್ತು ಸ್ಥಳಗಳಲ್ಲಿಯೂ ಶಿಬಿರ ಆಯೋಜಿಸಲಾಗುತ್ತದೆ. ನೇತ್ರದಾನ ಮಾಡುವಂತೆಯೂ ಸಿಬ್ಬಂದಿಯನ್ನು ಕೋರಲಾಗುತ್ತದೆ~ ಎಂದರು. ಮುನ್ನೂರು ಸಿಬ್ಬಂದಿ ತಪಾಸಣೆ ಮಾಡಿಸಿಕೊಂಡರು.