ಬೀದಿ ಬದಿ ವ್ಯಾಪಾರಿಗಳು ನಿರಾತಂಕವಾಗಿ ತಮ್ಮ ವ್ಯಾಪಾರ ವಹಿವಾಟು ಮುಂದುವರಿಸಲು ಅನುವು ಮಾಡಿಕೊಡುವ ಮಹತ್ವದ ಮಸೂದೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಆದರೆ, ಫುಟ್ಪಾಥ್ಗಳನ್ನು ಮಾತ್ರವಲ್ಲದೇ ರಸ್ತೆಯ ಮಧ್ಯದವರೆಗೆ, ತಮ್ಮ ತಳ್ಳುಗಾಡಿಗಳನ್ನು ನಿಲ್ಲಿಸಿಕೊಂಡು, ಬುಟ್ಟಿಗಳಲ್ಲಿ ಸರಕುಗಳನ್ನಿಟ್ಟುಕೊಂಡು ಕುಳಿತಿರುವ ವ್ಯಾಪಾರಿಗಳಿಂದ, ವಾಹನ ಚಾಲಕರಿಗೆ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಈ ತೊಂದರೆ ವಿಜಾಪುರ ಜಿಲ್ಲೆಯ ಎಲ್ಲಾ ತಾಲ್ಲೂಕು ಪಟ್ಟಣಗಳ ದಟ್ಟ ಜನ ಸಂಚಾರವಿರುವ ಪ್ರಮುಖ ರಸ್ತೆಗಳಲ್ಲಿ ದಿನನಿತ್ಯ ಕಂಡುಬರುತ್ತಿದೆ. ಇಂತಹ ಇಕ್ಕಟ್ಟಿನ ರಸ್ತೆಯಲ್ಲಿ, ಡಾ. ಬಾದರಬಂಡಿ ಎಂಬ ವ್ಯಕ್ತಿ, ದ್ವಿಚಕ್ರವಾಹನ ಹಾಯ್ದು, ಮೂಳೆ ಮುರಿದು ಅಂಗವಿಕಲರಾಗಿದ್ದಾರೆ!. ಬೀದಿ ಬದಿ ವ್ಯಾಪಾರ ಮಾಡುವ ಬಡಜನರಿಗೆ ಅನುಕೂಲ ಮಾಡುವುದು ತಪ್ಪಲ್ಲ. ಆದರೆ, ಅದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗದಂತೆ ಪುರಸಭೆ, ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು.