ಸಂಜಯ್ ದತ್ ಜೈಲುವಾಸದ ಪರಿಣಾಮ ಬಾಲಿವುಡ್ನಲ್ಲಿ ಎದ್ದುಕಾಣುತ್ತಿದೆ. `ಮುನ್ನಾಭಾಯ್' ಮೂರನೇ ಸರಣಿ ಏನಿದ್ದರೂ ಸಂಜಯ್ ಜೈಲಿನಿಂದ ಮರಳಿದ ನಂತರವೇ ಎಂದು ನಿರ್ದೇಶಕ ಸುಭಾಷ್ ಕಪೂರ್ ಘೋಷಿಸಿದ್ದಾರೆ. `ಸಂಜಯ್ ದತ್ ಇಲ್ಲದ ಮುನ್ನಭಾಯ್ನನ್ನು ಊಹಿಸುವುದೂ ಅಸಾಧ್ಯ' ಎಂದು ಅವರು ಹೇಳಿದ್ದಾರೆ.
1993ರ ಮುಂಬೈ ಸ್ಫೋಟಕ್ಕೆ ಸಂಬಂಧಿಸಿದಂತೆ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಸಂಜಯ್ ದತ್ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ಪ್ರಕಟವಾಗಿತ್ತು. ಶಿಕ್ಷೆ ಆರಂಭಕ್ಕೆ ಮತ್ತಷ್ಟು ಕಾಲಾವಕಾಶ ಕೋರಿದ್ದ ಸಂಜಯ್ ದತ್ ಅವರ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತು.
ಸುಭಾಷ್ ಕಪೂರ್ ತಮ್ಮ ಮುಂದಿನ ಚಿತ್ರಕ್ಕೆ `ಮುನ್ನಾಭಾಯ್ ಚಲೇ ದಿಲ್ಲಿ' ಎಂದು ಹೆಸರು ಇಟ್ಟಿದ್ದು, ಸಂಜಯ್ ದತ್ (ಮುನ್ನಾಭಾಯ್) ಹಾಗೂ ಅರ್ಷದ್ ವಾರ್ಸಿ (ಸರ್ಕೀಟ್) ಅವರೇ ಚಿತ್ರದ ಜೀವಾಳ. ಇಬ್ಬರಲ್ಲಿ ಒಬ್ಬರು ಇಲ್ಲದಿದ್ದರೂ ಚಿತ್ರ ನಿರ್ಮಾಣವಾಗದು. ಆದ್ದರಿಂದ ಸಂಜಯ್ ತಮ್ಮ ಜೈಲು ವಾಸ ಮುಗಿಸಿ ಬರುವವರೆಗೂ ಕಾಯುವುದಾಗಿ ಅವರು ಹೇಳಿದ್ದಾರೆ.
`ಮುನ್ನಭಾಯ್' ಸರಣಿಯ ಮೊಲದ ಎರಡು ಚಿತ್ರಗಳನ್ನು ರಾಜ್ಕುಮಾರ್ ಹಿರಾನಿ ನಿರ್ದೇಶಿಸಿದ್ದರು. ಆದರೆ ಇದರ ಮೂರನೇ ಸರಣಿ ನಿರ್ದೇಶಿಸುವ ಜವಾಬ್ದಾರಿ ಸುಭಾಷ್ ಕಪೂರ್ ಅವರ ಹೆಗಲಿಗೆ ಬಿದ್ದಿದೆ. ಪತ್ರಕರ್ತರಾಗಿದ್ದ ಸುಭಾಷ್ ನಂತರ ನಿರ್ದೇಶನದತ್ತ ಹೊರಳಿದರು. ಅವರ `ಸೇ ಸಲಾಮ್ ಇಂಡಿಯಾ' ಗೆಲ್ಲಾಪೆಟ್ಟಿಗೆಯಲ್ಲಿ ಗೆಲ್ಲಲಿಲ್ಲ. ನಂತರ ನಿರ್ದೇಶಿಸಿದ `ಫಸ್ ಗಯೆ ರೇ ಒಬಾಮಾ' ಹಾಗೂ `ಜಾಲಿ ಎಲ್ಎಲ್ಬಿ' ಚಿತ್ರಗಳು ತಕ್ಕಮಟ್ಟಿಗೆ ಹೆಸರು ತಂದುಕೊಟ್ಟವು. ಇದೀಗ ದೊಡ್ಡ ಅವಕಾಶವನ್ನು ಗಿಟ್ಟಿಸಿಕೊಂಡಿರುವ ಅವರು ಹಿಮಾಚಲ ಪ್ರದೇಶದ ಗಿರಿಪ್ರದೇಶದಲ್ಲಿ `ಮುನ್ನಭಾಯ್'ಗೆ ಚಿತ್ರಕಥೆ ಬರೆಯುತ್ತಿದ್ದಾರಂತೆ.