ಬೆಂಗಳೂರು: ಸಂತ ಮೇರಿಯ ಉತ್ಸವದ ಆಚರಣೆ ಪ್ರಯುಕ್ತ ಸೇಂಟ್ ಬೆಸಿಲಿಕಾ ಶಿವಾಜಿನಗರದ ಬಸ್ನಿಲ್ದಾಣ ಸಂದಿಸುವ ಎಲ್ಲ ರಸ್ತೆಗಳು ಭಾನುವಾರ ಸಂಜೆ ತುಂಬಿ ತುಳುಕುತ್ತಿದ್ದವು.
ಸಂತ ಮೇರಿಯ ಹುಟ್ಟುಹಬ್ಬದ ದಿನದ ಅಂಗವಾಗಿ ಶಿವಾಜಿನಗರ ಬಸ್ ನಿಲ್ದಾಣದ ಆನತಿ ದೂರದಲ್ಲಿರುವ ಸಂತ ಮೇರಿ ಬೆಸಿಲಿಕಾ ಚರ್ಚ್ನಲ್ಲಿ ಬೆಂಗಳೂರಿನ ಆರ್ಚ್ ಬಿಷಪ್ ರೆವರೆಂಡ್ ಬರ್ನಾರ್ಡ್ ಮೊರಾಸ್, ಸಂಜೆ ಭಕ್ತರಿಗೆ ಶಾಂತಿ ಸಂದೇಶ ನೀಡುವ ಮೂಲಕ ರಥಕ್ಕೆ ಚಾಲನೆ ನೀಡಿದರು.
ಮೇರಿ ಮಾತೆಯು ಪುಟ್ಟ ಏಸುವನ್ನು ಹೊತ್ತ ಭಂಗಿಯಲ್ಲಿರುವ ಮೂರ್ತಿ ಹೊತ್ತ ಶ್ವೇತ ಬಣ್ಣದ ರಥ ಮುಂದೆ ಮುಂದೆ ಸಾಗುತ್ತಿದ್ದಂತೆಯೇ ಸಾವಿರಾರು ಭಕ್ತರು ಮಲ್ಲಿಗೆ ಹೂಗಳನ್ನು ರಥದತ್ತ ತೂರಿದರು.
ಇನ್ನು ಕೆಲವರು ತಮ್ಮಲ್ಲಿದ್ದ ಶಿಲುಬೆ ಹೊಂದಿದ ಸರವನ್ನು ಕೈಯಲ್ಲಿ ಹಿಡಿದು ನಮಿಸುತ್ತಿದ್ದರು. ರಥದ ಬೆಳಕು ಎದುರಿಗಿದ ಭಕ್ತರ ಮುಖದ ಮೇಲೆ ಬೀಳುತ್ತಿದ್ದಂತೆಯೇ ಭಕ್ತರು ಧನ್ಯತಾ ಭಾವದಲ್ಲಿದ್ದವರಂತೆ ಕಂಡು ಬಂದರು. ಸಂಜೆ 6 ಗಂಟೆ ಸುಮಾರಿಗೆ ಹೊರಟ ಸಂತ ಮೇರಿಯ ರಥವು ಶಿವಾಜಿನಗರ ಬಸ್ ನಿಲ್ದಾಣಕ್ಕೆ ಬರುವ ಹೊತ್ತಿ ಗಾಗಲೇ ಜನಜಂಗುಳಿಯಿಂದ ರಸ್ತೆಯ ಇಕ್ಕೆಲಗಳು ತುಂಬಿದ್ದವು.