ಬೆಂಗಳೂರು: ನಾಯಿಗಳ ಸಂತಾನಶಕ್ತಿ ಹರಣ ಕುರಿತು ಕೇಂದ್ರ ಸಂಸ್ಕೃತಿ ಸಚಿವಾಲಯ ರೂಪಿಸಿರುವ ನಿಯಮ, ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಪರಿಣಾಮಕಾರಿ ಅಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸುಪ್ರೀಂಕೋರ್ಟ್ಗೆ ತಿಳಿಸಿದೆ.
ಕಳೆದು ಒಂದು ದಶಕದ ಅವಧಿಯಲ್ಲಿ ಈ ಯೋಜನೆಯಡಿ ಅಂದಾಜು ರೂ 11 ಕೋಟಿ ಖರ್ಚು ಮಾಡಲಾಗಿದೆ. ಆದರೆ ಇದರಿಂದ ಶೇ 15-20ರಷ್ಟು ಬೀದಿ ನಾಯಿಗಳನ್ನು ಮಾತ್ರ ನಿಯಂತ್ರಿಸಲು ಸಾಧ್ಯವಾಗಿದೆ ಎಂದು ಅದು ಆಗಸ್ಟ್ 2ರಂದು ಸಲ್ಲಿಸಿದ ಪ್ರಮಾಣಪತ್ರದಲ್ಲಿ ಹೇಳಿದೆ. ಈ ನಿಯಮಗಳನ್ನು ಪ್ರಶ್ನಿಸಿ ಹಲವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯಲ್ಲಿ ತನ್ನನ್ನೂ ಭಾಗಿಯಾಗಿಸಬೇಕು ಎಂದು ಕೋರಿ ಬಿಬಿಎಂಪಿ ಸಲ್ಲಿಸಿರುವ ಅರ್ಜಿಯಲ್ಲಿ ಈ ವಾದ ಮುಂದಿಡಲಾಗಿದೆ.
`ಬೀದಿ ನಾಯಿಗಳ ಹಾವಳಿಯಿಂದ ಮನುಷ್ಯರ ಜೀವ ಕಾಪಾಡುವ ಬಗ್ಗೆ ಈ ನಿಯಮಾವಳಿಯಲ್ಲಿ ಪ್ರಸ್ತಾವ ಇಲ್ಲ. 1998ರ ನಂತರ ರಾಜ್ಯದ ಕೆಲವು ಪ್ರದೇಶಗಳಲ್ಲಿ ನಾಯಿಗಳ ಸಂತಾನಶಕ್ತಿ ಹರಣ ಮಾಡಿ, ಅವುಗಳ ಹಾವಳಿ ನಿಯಂತ್ರಿಸುವ ಪ್ರಯತ್ನ ನಡೆದಿದೆ. ಆದರೂ ಹಲವು ಮಕ್ಕಳು ಬೀದಿ ನಾಯಿಗಳ ದಾಳಿಗೆ ಒಳಗಾಗಿದ್ದಾರೆ ಎಂದು ಪ್ರಮಾಣಪತ್ರ ಹೇಳಿದೆ.
ಈ ನಿಯಮಾವಳಿ, ಪ್ರಾಣಿ ಹಿಂಸೆ ನಿಯಂತ್ರಣ ಕಾಯ್ದೆಗೆ ವಿರುದ್ಧವಾಗಿದೆ. ಪ್ರಾಣಿಗಳಿಗೆ ಆಗುತ್ತಿರುವ ಹಿಂಸೆಯನ್ನು ತಡೆಯುವುದರಲ್ಲಿ, ರೇಬಿಸ್ ರೋಗ ತಡೆಗಟ್ಟುವುದರಲ್ಲಿ ಅಥವಾ ಮಾನವ ಜೀವ ರಕ್ಷಣೆ ಮಾಡುವ ಬಗ್ಗೆ ಸಂಸ್ಕೃತಿ ಸಚಿವಾಲಯಕ್ಕೆ ಯಾವುದೇ ಅನುಭವ ಇಲ್ಲ ಎಂದು ಪ್ರತಿಪಾದಿಸಿದೆ.
`ಮನುಷ್ಯರನ್ನು ಬಲಿಕೊಟ್ಟಾದರೂ ನಾಯಿಗಳ ಜೀವ ಉಳಿಸಬೇಕು ಎಂಬ ವಾದ ಭಾರತದಲ್ಲಿ ಮಾತ್ರ ಕೇಳಿಬರುತ್ತದೆ. ಬೀದಿ ನಾಯಿಗಳ ಹಾವಳಿಯಿಂದ ಮನುಷ್ಯರಿಗೆ ಆಗುವ ಹಿಂಸೆಗೆ ಕೆಲವು ಸ್ವಯಂಸೇವಾ ಸಂಸ್ಥೆಗಳನ್ನು ಕಾನೂನು ಹಾಗೂ ಆರ್ಥಿಕ ನೆಲೆಯಲ್ಲಿ ಹೊಣೆ ಮಾಡಬೇಕು~ ಎಂದು ಬಿಬಿಎಂಪಿಯು ಸುಪ್ರೀಂ ಕೋರ್ಟ್ಗೆ ಮನವಿ ಮಾಡಿಕೊಂಡಿದೆ.