ಕಳಸ: ಡಿಸೆಂಬರ್ ತಿಂಗಳು ಆರಂಭವಾಗುತ್ತಿದ್ದಂತೆ ಕಳಸ ಸಂತೆಯಲ್ಲಿ ವ್ಯಾಪಾರ ಚುರುಕಾಗುತ್ತದೆ. ಆದರೆ ವಾರದ ಸಂತೆಯ ಕಟ್ಟಡದ ಆಸುಪಾಸಿನಲ್ಲಿ ಗಬ್ಬು ನಾರುತ್ತಿದ್ದು ರೋಗ ಹರಡುವ ತಾಣವಾಗಿ ಮಾರ್ಪಾಡಾಗಿದೆ. ಕಳಸದಲ್ಲಿ 2 ದಶಕದ ಹಿಂದೆ ಸಂತೆ ಕಟ್ಟೆಯೊಂದನ್ನು ನಿರ್ಮಿಸಿದಾಗಿನಿಂದ ಸಂತೆ ವ್ಯಾಪಾರ ನಿರಾತಂಕವಾಗಿ ನಡೆದಿತ್ತು.
ಆದರೆ ವಾರದ ಉಳಿದ ದಿನಗಳಲ್ಲಿ ಈ ಕಟ್ಟಡವು ವಲಸಿಗರ ಆಶ್ರಯತಾಣ ಆಯಿತು. ಅವರು ಅಡುಗೆ ಬೇಯಿಸಲು ಎಲ್ಲೆಂದರಲ್ಲಿ ಹಾಕಲಾಗುತ್ತಿದ್ದ ಬೆಂಕಿ ಈ ಕಟ್ಟಡದ ನೆಲವನ್ನು ಬಹುತೇಕ ಕಬಳಿಸಿದೆ. 5 ವರ್ಷದ ಹಿಂದೆ ಈ ಕಟ್ಟಡಕ್ಕೆ ಹೊಂದಿಕೊಂಡಂತೆ ಮತ್ತೊಂದು ಕಟ್ಟಡವನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿತ್ತು. ಆದರೆ ಆ ಕಟ್ಟಡವೂ ಇದೀಗ ನಿರ್ವಹಣೆ ಕೊರತೆಯಿಂದ ಹಾಳಾಗುತ್ತಿದೆ.
‘ಪಂಚಾಯಿತಿಯು ಸಂತೆ ಅಂಗಡಿಗಳಿಗೆ ಪ್ರತಿ ವಾರ ಕರ ವಸೂಲಿ ಮಾಡುತ್ತದೆ. ಆದರೆ ಇಲ್ಲಿನ ಅವ್ಯವಸ್ಥೆ ನೋಡಿ ಜನರು ಸಂತೆಗೆ ಬರುವುದನ್ನೇ ಬಿಟ್ಟಿದ್ದಾರೆ’ ಎಂದು ಸಂತೆ ಅಂಗಡಿ ಮಾಲೀಕರೊಬ್ಬರು ಹೇಳುತ್ತಾರೆ. ‘ಸಂತೆ ಕಟ್ಟೆ ಸುತ್ತಲೂ ತಿರುಕರು ಮತ್ತು ವಲಸೆ ಜನರು ಮಲ ಮೂತ್ರ ವಿಸರ್ಜನೆ ಮಾಡಿರುತ್ತಾರೆ. ಇಲ್ಲಿನ ದುರ್ವಾಸನೆ ಸಹಿಸಿಕೊಂಡು ಭಾನುವಾರ ವ್ಯಾಪಾರ ನಡೆಸುವುದೇ ಅಸಾಧ್ಯ’ ಎನ್ನುತ್ತಾರೆ ವ್ಯಾಪಾರಿಗಳು.
ಸಂತೆ ಕಟ್ಟೆಯ ಸುತ್ತಲಿನ ಆನಾರೋಗ್ಯಕರ ವಾತಾವರಣ ನೋಡಿದರೆ ಸೊಳ್ಳೆ ಮತ್ತಿತರ ಕ್ರಿಮಿಗಳು ಜನ್ಮ ತಾಳುವ ಪ್ರಶಸ್ತ ತಾಣ ಎಂಬುದು ನಿರೂಪಿತವಾಗುತ್ತದೆ. ಮಳೆಗಾಲದಲ್ಲಂತೂ ಸಂತೆಗೆ ಹೋಗಿ ಬರುವುದು ಸಾಹಸದ ಕಾರ್ಯ ಎಂಬಂತೆ ಆಗಿದೆ. ಬಗೆ ಬಗೆಯ ತರಕಾರಿ ಮತ್ತು ದಿನಸಿ ಮಾರುವ ಸಂತೆಯ ಸುತ್ತಲೂ ರೋಗ ಹರಡುವ ಕ್ರಿಮಿಗಳು ಕಂಡು ಬರುತ್ತಿವೆ. ಈ ವಸ್ತುಗಳನ್ನು ಖರೀದಿಸುವವರಿಗೂ ರೋಗ ಹರಡುವ ಸಾಧ್ಯತೆ ಹೆಚ್ಚಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
‘ಸಂತೆಯ ಸುತ್ತಲೂ ಪ್ಲಾಸ್ಟಿಕ್ ಮತ್ತಿತರ ಕೊಳಚೆ ವಸ್ತುಗಳನ್ನು ಶುಚಿ ಮಾಡುವವರೇ ಇಲ್ಲ. ಮಳೆ ಸುರಿದಾಗ ಈ ವಸ್ತುಗಳೆಲ್ಲ ನಮ್ಮ ಮನೆ ಅಂಗಳಕ್ಕೆ ತೇಲಿ ಬಂದು ಅಸಹ್ಯ ಮೂಡಿಸುತ್ತದೆ ’ಎಂದು ಸಂತೆಕಟ್ಟೆಯ ಕೆಳಭಾಗದಲ್ಲಿ ವಾಸಿಸುವ ಪುರುಷೋತ್ತಮ ಪ್ರಭು ದೂರುತ್ತಾರೆ.
ಆದರೆ ಈ ಸಮಸ್ಯೆಗಳಿಗೆಲ್ಲ ಪರಿಹಾರ ರೂಪಿಸಬೇಕಿದ್ದ ಕಳಸ ಗ್ರಾಮ ಪಂಚಾಯಿತಿ ಮಾತ್ರ ಸಂತೆ ಕಟ್ಟೆ ಆಸುಪಾಸಿನ ಅವ್ಯವಸ್ಥೆಗೂ ತನಗೂ ಸಂಬಂಧವೇ ಇಲ್ಲ ಎಂಬಂಥ ಧೋರಣೆ ಹೊಂದಿದೆ ಎಂದು ಸ್ಥಳೀಯರು ಆಪಾದಿಸುತ್ತಾರೆ.
– ರವಿ ಕೆಳಂಗಡಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.