ಕೂಡಲಸಂಗಮ: ಸಮೀಪದ ತುರಡಗಿ ನಿರಾಶ್ರಿತರ ಶೆಡ್ಡುಗಳಲ್ಲಿ ಕಳೆದ 15 ದಿನಗಳಿಂದ ಮಲೇರಿಯಾ ಹೆಚ್ಚಾಗಿದ್ದು ಜನರು ಸಂಕಷ್ಟಕ್ಕೆ ಒಳ ಗಾಗಿದ್ದಾರೆ.
ತುರಡಗಿ ಗ್ರಾಮವು 2005ರಲ್ಲಿ ನಾರಾಯಣ ಪುರ ಹಿನ್ನೀರಿನಿಂದಾಗಿ ಸುತ್ತುವರಿದಿತ್ತು. ಆಗ ಸರ್ಕಾರ ಗ್ರಾಮದ ಜನರಿಗಾಗಿ ತಾತ್ಕಾಲಿಕ ಶೆಡ್ಡು ಗಳನ್ನು ನಿರ್ಮಿಸಿಕೊಟ್ಟಿತ್ತು. ಅಂದಿನಿಂದ ಜನರು ತಗಡಿನ ಶೆಡ್ಡಿನಲ್ಲೇ ಜೀವನ ಸಾಗಿಸುತ್ತಿದ್ದಾರೆ.
ತುರಡಗಿ ನಿರಾಶ್ರಿತ ಶಿಬಿರದಲ್ಲಿ 230 ಕುಟುಂಬಗಳು ಶೆಡ್ಡಿನಲ್ಲಿ ವಾಸ ಮಾಡು ತ್ತಿದ್ದು ಹದಿನೈದು ದಿನಗಳ ಹಿಂದೆ ಮಳೆ ಯಾದಾಗ ನೀರು ಶೆಡ್ಡುಗಳ ಪಕ್ಕದಲ್ಲಿ ಮತ್ತು ರಸ್ತೆಯ ಬದಿಯಲ್ಲಿ ನಿಂತು ಸೊಳ್ಳೆಗಳ ಉತ್ಪತ್ತಿಯಾಗಿದೆ.
ಸಂಜೆಯಾಗುತ್ತಿದ್ದಂತೆ ಗ್ರಾಮದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗುತ್ತದೆ. ರಾತ್ರಿ ಮನೆಯ ಮುಂದೆ ಹಸಿ ಬೇವಿನ ತಪ್ಪ ಲಿಗೆ ಬೆಂಕಿ ಹಚ್ಚಿ ಸೊಳ್ಳೆಯಿಂದ ರಕ್ಷಣೆ ಪಡೆಯುವ `ಸಾಹಸ~ವನ್ನು ಜನರು ಮಾಡುತ್ತಿದ್ದಾರೆ. ಆದರೂ ಗ್ರಾಮದಲ್ಲಿ 50ಕ್ಕೂ ಹೆಚ್ಚು ಮಂದಿಯಲ್ಲಿ ಮಲೇರಿ ಯಾ ಕಾಯಿಲೆ ಕಂಡುಬಂದಿದೆ.
ಸೊಳ್ಳೆ ನಿಯಂತ್ರಣಕ್ಕೆ ಕ್ರಮಕೈಗೊಳ್ಳು ವಂತೆ ಕೂಡಲಸಂಗಮ ಗ್ರಾಮ ಪಂಚಾಯಿತಿ ಹಾಗೂ ಸಮುದಾಯ ಆರೋಗ್ಯ ಕೇಂದ್ರಕ್ಕೆ ವಿನಂತಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜನರು ದೂರಿದ್ದಾರೆ.
ಗ್ರಾಮದಲ್ಲಿ ವೈದ್ಯರು ಇಲ್ಲ. ನಾಲ್ಕು ಕಿ.ಮೀ. ದೂರದ ಕೂಡಲಸಂಗಮ ಸಮುದಾಯ ಅರೋಗ್ಯ ಕೇಂದ್ರಕ್ಕೆ ಬಂದರೆ ಅಲ್ಲೂ ವೈದ್ಯರು ಸಿಗುವುದಿಲ್ಲ. ಅಲ್ಲಿನ ಸಿಬ್ಬಂದಿ ಹುನಗುಂದಕ್ಕೆ ಹೋಗಿ ಎಂದು ಹೇಳುತ್ತಾರೆ ಎಂಬುದು ಜನರ ಆರೋಪ.
`ನಿತ್ಯ ಕೂಲಿ ಮಾಡಿ ಬದುಕುವ ನಮಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆಗದು. ಸಮಸ್ಯೆಯನ್ನು ಯಾರ ಮುಂದೆ ಹೇಳಬೇಕೆಂದೇ ತಿಳಿ ಯುತ್ತಿಲ್ಲ~ ಎಂದು ಹೇಳುತ್ತಾರೆ, ಗ್ರಾಮದ ಹನಮ್ಮಪ್ಪ ಕಾರಿಜೋಳ.
ಅಧಿಕಾರಿಗಳು ಗ್ರಾಮವನ್ನು ಸೊಳ್ಳೆಗಳಿಂದ ರಕ್ಷಿಸಲು ಕ್ರಮ ಕೈಗೊಂಡು ಜನರನ್ನು ಅನಾರೋಗ್ಯ ದಿಂದ ಕಾಪಾಡಬೇಕು ಎಂದು ಗ್ರಾಮ ಸ್ಥರು ಆಗ್ರಹಿಸಿದ್ದಾರೆ.