ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಧಾನಕ್ಕೆ ಪ್ರಯತ್ನಿಸಿಲ್ಲ

Last Updated 20 ಜೂನ್ 2011, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಆಣೆ ಪ್ರಮಾಣ ಮಾಡುವುದು ಅವರವರ ನಂಬಿಕೆಗೆ ಬಿಟ್ಟ ವಿಚಾರ. ಆದರೆ, ಪ್ರಜಾಪ್ರಭುತ್ವದಲ್ಲಿ ಅಂತಿಮವಾಗಿ ಜನರು ಮುಖ್ಯ. ದೇವರಿಗಿಂತ ದೊಡ್ಡವರು ಜನರು. ಅಂತಿಮವಾಗಿ ಜನರೇ ತೀರ್ಪು ನೀಡುತ್ತಾರೆ ಎಂದು ಎಂದು ಕಂದಾಯ ಸಚಿವ ಜಿ. ಕರುಣಾಕರರೆಡ್ಡಿ ಸೋಮವಾರ ಇಲ್ಲಿ ಹೇಳಿದರು.

`ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಾಲಿಗೆ ದೊಡ್ಡದು. ಅವರಿಗೆ ಇರುವಷ್ಟು ದೊಡ್ಡ ನಾಲಿಗೆ ಬೇರೆ ಯಾರಿಗೂ ಇಲ್ಲ. ಆರೋಪಗಳಿದ್ದರೆ ನ್ಯಾಯಾಲಯದಲ್ಲಿ ದಾಖಲೆ ಸಮೇತ ಸಾಬೀತು ಪಡಿಸಲಿ~ ಎಂದರು.

ತಾವು ಎಂದಿಗೂ ಕುಮಾರಸ್ವಾಮಿ ಜತೆ ಸಂಧಾನಕ್ಕೆ ಪ್ರಯತ್ನಿಸಿಲ್ಲ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡುವ ಪರಿಸ್ಥಿತಿ ನಮಗೆ ಬಂದಿಲ್ಲ. ಮುಂದೆಯೂ ಬರುವುದಿಲ್ಲ ಎಂದು ನುಡಿದರು.

`ಘನತೆಯಿಂದ ನಡೆದುಕೊಳ್ಳಲಿ~
ಕೊಪ್ಪಳ:
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘನತೆಯಿಂದ ನಡೆದುಕೊಳ್ಳಬೇಕು ಎಂದು ಕೆ.ಪಿ.ಸಿ.ಸಿ. ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೋಮವಾರ ಇಲ್ಲಿ ಅಭಿಪ್ರಾಯಪಟ್ಟರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು. ವಿರೋಧ ಪಕ್ಷಗಳ  ನಾಯಕರು ಮಾಡುವ ಟೀಕೆಗಳಿಂದ ಉದ್ವೇಗಕ್ಕೆ ಒಳಗಾಗಿ ಆಣೆ- ಪ್ರಮಾಣದ ಮೊರೆ ಹೋಗಬಾರದು. ಕುಮಾರಸ್ವಾಮಿ ಅವರಿಗೆ ಉತ್ತರ ನೀಡುವುದಕ್ಕಾಗಿ ತೆರಿಗೆ ಹಣವನ್ನು ಪೋಲು ಮಾಡಿದ್ದು ಸರಿಯಲ್ಲ ಎಂದ ಅವರು, ಇಂತಹ ವಿಷಯಗಳು ಈ ಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಬಾರದು ಎಂದರು.

ಇಲ್ಲಿನ ಗವಿ ಮಠಕ್ಕೆ ಭೇಟಿ ನೀಡಿದ್ದಕ್ಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ. ಅಲ್ಲದೇ, ಕಾಂಗ್ರೆಸ್‌ಗೂ ಮಠಾಧೀಶರ ಮನವೊಲಿಕೆ, ಮಾರ್ಗದರ್ಶನ- ಸಂಪರ್ಕ ಅನಿವಾರ್ಯವಾಗಲಿದೆ ಎಂಬುದನ್ನೂ ಈ ಭೇಟಿ ಸಾಬೀತು ಪಡಿಸುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

`ರೈತನ ಮೇಲೆ ಆಣೆ ಮಾಡಲಿ~
ಕೂಡಲಸಂಗಮ:
`ಯಡಿಯೂರಪ್ಪ, ಕುಮಾರಸ್ವಾಮಿ ಅವರು ಕಣ್ಣಿಗೆ ಕಾಣದ ದೇವರ ಮೇಲೆ ಆಣೆ ಮಾಡುವ ಬದಲು, ರೈತನ ಮೇಲೆ ಆಣೆ ಮಾಡಲಿ~ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು. ಅವರು ಕೂಡಲಸಂಗಮದ ಸಂಗಮೇಶ್ವರ ಉಚಿತ ಪ್ರಸಾದ ನಿಲಯದ ಸಾಂಸ್ಕೃತಿಕ ಭವನದಲ್ಲಿ  ಕರ್ನಾಟಕ ರೈತ ಮೋರ್ಚಾದ ಸಮಾರಂಭದಲ್ಲಿ ಮಾತನಾಡಿದ ಅವರು, ಅಮೂರ್ತ ದೇವರ ಬಗ್ಗೆ ಮಾತನಾಡದೆ ರೈತನ ಬಗ್ಗೆ ನಂಬಿಕೆ ಇಟ್ಟುಕೊಳ್ಳಬೇಕು~ ಎಂದರು.

ನಂಬಿಕೆ ಹಾಳಾಗದಿರಲಿ: ಸಂತೋಷ ಹೆಗ್ಡೆ
ಉಡುಪಿ:
`ಇದು ದೇವಸ್ಥಾನದಲ್ಲಿ ಬಗೆಹರಿಯುವ ವಿಚಾರವಲ್ಲ. ಭ್ರಷ್ಟಾಚಾರ ವಿಚಾರಣೆಗೆ ನ್ಯಾಯಾಂಗ ವ್ಯವಸ್ಥೆ ಇದೆಯಲ್ಲ. ಇವರ ಆಣೆ ಪ್ರಮಾಣದಿಂದಾಗಿ ಮಂಜುನಾಥನ ಮೇಲಿನ ಜನರ ನಂಬಿಕೆ ಹಾಳಾಗದಿರಲಿ~ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ ಹೆಗ್ಡೆ ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿ ಅವರ `ಆಣೆ~ ಬಗ್ಗೆ ಸೋಮವಾರ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT